Friday, October 28, 2011

ಸ್ತ್ರೀ ಸಮಾನತೆ : ಎರಡು ಮುಖಗಳು

ಮುಖ ೧:

ಗಂಡಾಗಲಿಲ್ಲವಲ್ಲ

ಎಂದು ಕೊರಗುತ್ತಿದ್ದ ಅಪ್ಪನ

ಮಗಳು

ಮೊದಲ ಸಂಬಳದ

ದೊಡ್ಡ ಮೊತ್ತ ಕೈಯಲ್ಲಿಟ್ಟು

ಹೆಮ್ಮೆಯ ನಗು ನಕ್ಕಾಗ

ಅಪ್ಪನ ಕಣ್ಣಲ್ಲಿ ನೀರು

----------------------------------------------------------------------

ಮೊಮ್ಮಗಳು ಲೀಲಾಜಾಲವಾಗಿ

ಕಾರು ಓಡಿಸುವುದು, ಆಫೀಸಿಗೆ ಹೋಗುವುದು

ಇವೆಲ್ಲಾ ನೋಡಿ

ಆಯ್ಯೋ ಮುಂಡೇದೇ,

ಹೆಂಗಸರು

ಇಷ್ಟೆಲ್ಲಾ ಮಾಡಬಹುದು ಅಂತಾ

ಗೊತ್ತೇ ಇರಲಿಲ್ಲವೇ

ಎಂದು ಅಜ್ಜಿ ಮೂಗಿನ ಮೇಲೆ ಬೆರಳಿಟ್ಟಳು.

--------------------------------------------------------------------------

ಬಾಕಿ ಹುಡುಗರು

ನನಗೆ ಬೈಯ್ತಾರೆ ಅಂತ

ಅಳುತ್ತಾ ಬಂದ

ತಮ್ಮನ

ಸಮಾಧಾನಿಸಿದ ಅಕ್ಕ

ಹುಡುಗರಿಗೆ ಕಿವಿ ಹಿಂಡಿ,

ತಪರಾಕಿ ಕೊಟ್ಟು

ತಮ್ಮನ್ನ ಆಟಕ್ಕೆ ಸೇರಿಸಿ ಬಂದಳು.

--------------------------------------------------------------------------------

ಅಡಿಗೆಮೂಲೆಯ ಮಡಿಕೆ ಕುಡಿಕೆಯಲ್ಲಿ

ಸಂಜೆಯ ಕುಡಿತಕ್ಕೆ

ಚಿಲ್ಲರೆ ಕಾಸು ಹುಡುಕುತ್ತಿದ್ದ

ಅಪ್ಪನಿಗೆ

ಸಣ್ಣ ಮಗಳು ತಮಾಷೆಗೆ

"ಅಮ್ಮ ಬಂದಳು"

ಎನ್ನಲು

ಅಪ್ಪ ಸತ್ತೆನೋ ಕೆಟ್ಟೆನೋ ಎಂದು ಪರಾರಿಯಾದ.

-----------------------------------------------------------------------------------------

ಮುಖ ೨

ಪುರುಷರಿಗೆ ನಾವೇನು ಕಡಿಮೆ

ಎಂದು ಘೋಷಣೆ ಕೂಗಿ ದಣಿದು

ಮನೆಗೆ ಬಂದವಳಿಗೆ

ಗಂಡನ ನಿರೀಕ್ಷೆಯ ಪ್ರಮೋಷನ್

ಮಹಿಳಾ ಸಹೋದ್ಯೋಗಿಗೆ ಸಿಕ್ಕಿತು ಎಂದಾಗ

ಬಿನ್ನಾಣಗಿತ್ತಿಯ

ಮುಖಾ ನೋಡಿ ಕೊಟ್ಟಿರಬಹುದು

ಎಂದು ನೆಟಿಗೆ ಮುರಿದಳು

---------------------------------------------------------------------------------

ಮದುವೆಗೆ ಮುಂಚೆ

ಗಂಡನ ಮನೆಯಲ್ಲಿ ಯಾಕಿರಬೇಕು?

ಗಂಡನ ಹೆಸರು ನಾನೇಕೆ ತೊಡಬೇಕು?

ಎಂದೆಲ್ಲಾ ಕೇಳುತ್ತಿದ್ದ ಹುಡುಗಿ

ನಂತರ

ಮಾವನ ಆಸ್ತಿ ಪಾಲು ಮಾಡುವಾಗ

ದೊಡ್ಡ ಪಾಲು

ನನಗಿರಲಿ ಅಂದಳು

--------------------------------------------------------------------------

ಆಫೀಸಿನಲ್ಲಿ

ಫೈರ್‍ ಬ್ರಾಂಡ್ ಎಂದು ಹೆಸರಾದ

ಆಕೆ

ಮನೆಯಲ್ಲಿ ರಾತ್ರಿ

ಇಲಿ ಓಡಾಡಿದ ಶಬ್ದವಾಗಲು

ಗಡಬಡಿಸಿ

ಟೇಬಲ್ ಹತ್ತಿ ನಿಂತು

ಗಂಡನಿಗೆ

ರೀ ಅಂದಳು.

------------------------------------------------------------------------------

ತಡವಾದ ಕಾರಿಗಾಗಿ

ಕಾಯುತ್ತಿದ್ದ

ಅಧಿಕಾರಿಣಿ

ಮಗಳಿಗೆ ಹುಷಾರಿರಲಿಲ್ಲ ಅಮ್ಮಾವ್ರೆ

ಎನ್ನುತ್ತಿದ್ದ ಡ್ರೈವರನ

ಕೆನ್ನೆಗೆ ಬಿಗಿದಳು

Sunday, October 9, 2011

ಕೈಲಾಸಂ ಎಂಬ ದುರಂತ ದಂತಕಥೆ

ಕನ್ನಡ ಸಾಹಿತ್ಯ ಲೋಕದಲ್ಲಿ, ಅದರಲ್ಲೂ, ನಾಟಕರಂಗದಲ್ಲಿ , ತಮ್ಮದೇ ಆದ ಛಾಪು ಮೂಡಿಸಿದ ಕೈಲಾಸಂ ತಮ್ಮ ಬದುಕಿನ ಶೈಲಿಯಿಂದ, ಹಾಸ್ಯಮಯ ಮಾತಿನ ಮೋಡಿಯಿಂದ, ಪ್ರತಿಭೆಯಿಂದ ,ಬಹುವಿಷಯಗಳಲ್ಲಿ ವಿದ್ವತ್ತಿನಿಂದ , ದಂತಕಥೆಯೇ ಆಗಿಹೋಗಿದ್ದಾರೆ. ಅವರು ಇಲ್ಲವಾಗಿ ಆರು ದಶಕಗಳು ಮೀರಿದ್ದರೂ, ಇಂದಿಗೂ ಅವರ ಬಗೆಗಿನ ಕುತೂಹಲ, ಆದರಾಭಿಮಾನ , ಕನ್ನಡಿಗರಲ್ಲಿ ಜಾಗೃತವಾಗಿದೆ.


ತ್ಯಾಗರಾಜ ಪರಮಶಿವ ಕೈಲಾಸಂರ ಪೂರ್ವಜರು ತಮಿಳುನಾಡಿನ ತಂಜಾವೂರು ಕಡೆಯವರು. ದಿವಾನ್ ಶೇಷಾದ್ರಿ ಅಯ್ಯರ್ ಕಾಲದಲ್ಲಿ ಮೈಸೂರಿಗೆ ಬಂದು ನೆಲೆಸಿದವರು.ಅವರ ತಂದೆ ಪರಮಶಿವ ಅಯ್ಯರ್ ಮೈಸೂರಿನ ಛೀಫ್ ಕೋರ್ಟಿನ ಜಡ್ಜಿಯಾಗಿದ್ದರು. ಇಂಥಾ ಆಢ್ಯ ಮನೆತನದಲ್ಲಿ ಜನ್ಮ ತಳೆದವರು ಕೈಲಾಸಂ.


ಹುಟ್ಟಿದ ವರ್ಷದ ಬಗ್ಯೆ ಭಿನ್ನಾಭಿಪ್ರಾಯಗಳಿದ್ದರೂ, ೧೮೮೪ರ ಜುಲೈ ೨೭ ಅವರ ಹುಟ್ಟಿದ ದಿನ ಎಂದು ಸಾಧಾರಣವಾಗಿ ಒಪ್ಪಲಾಗಿದೆ. ೧೯೮೪ರಲ್ಲಿ ಅವರ ಶತಮಾನೋತ್ಸವವನ್ನು ಕರ್ನಾಟಕ ಮಾತ್ರವಲ್ಲದೇ, ಇತರ ಕಡೆಗಳಲ್ಲಿಯೂ ಆಚರಿಸಲಾಯಿತು. ಹುಟ್ಟಿದ್ದು ಬೆಂಗಳೂರಿನ ’ತಾರಾಮಂಡಲ ಪೇಟೆ’ ಎಂದು ಕರೆಯಲಾಗುತ್ತಿದ್ದ ಪ್ರದೇಶದಲ್ಲಿ. ಇದು ಧರ್ಮರಾಯನ ಗುಡಿ, ಅವೆನ್ಯೂ ರಸ್ತೆ, ಚಿಕ್ಕಪೇಟೆ ಚೌಕ ಇವುಗಳ ಹತ್ತಿರದಲ್ಲಿತ್ತು. ಅಲ್ಲಿ ಪಟಾಕಿ ತಯಾರಿಸುವ ಕೆಲಸ ನಡೆಯುತ್ತಿದ್ದಿದ್ದರಿಂದ ’ತಾರಾಮಂಡಲ ಪೇಟೆ’ ಎಂಬ ಹೆಸರು ಬಂದಿತ್ತು. ಅವರ ತಂದೆ ವರ್ಗವಾದ ಕಡೆಗಳಲ್ಲಿ ಬೆಂಗಳೂರು, ಹಾಸನ ಇತ್ಯಾದಿ, ಅವರ ಪ್ರಾಥಮಿಕ ವಿದ್ಯಾಭ್ಯಾಸ ನಡೆಯಿತು. ಹೈಸ್ಕೂಲು ಕೆಲಕಾಲ ಮೈಸೂರಿನಲ್ಲಿ ನಡೆಯಿತು. ಆಗ ಅವರ ಹಾಸ್ಟೆಲ್ ಸಹಪಾಠಿಗಳು ಬಿ.ಎಂ.ಶ್ರೀ ಮತ್ತು (ಮುಂದೆ ಪ್ರೋ.) ಎನ್.ಎಸ್. ಸುಬ್ಬರಾಯರು. ಮೆಟ್ರಿಕ್ಯುಲೇಷನ್ನಿಗೆ ಮದರಾಸಿಗೆ ಹೋಗಿ ಅಲ್ಲಿ ರೈಟ್ ಆನರಬಲ್ ಶ್ರೀನಿವಾಸ ಶಾಸ್ತ್ರಿಗಳ ಪ್ರಿಯ ಶಿಷ್ಯರಾದರು. ಮುಂದೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದಿ ಇಡೀ ಮದರಾಸು ಪ್ರಾಂತ್ಯಕ್ಕೇ ಮೊದಲಸ್ಥಾನ ಗಳಿಸಿ ಬಿ.ಎ ತೇರ್ಗಡೆಯಾದರು. ಇದಕ್ಕಾಗಿ ವಿಶ್ವವಿದ್ಯಾನಿಯದ ಕ್ರೋಮಾರ್ಟಿ (Cromarty) ಪದಕವನ್ನು ಪಡೆದರು. ಇದು ನಡೆದದ್ದು ೧೯೦೭ರಲ್ಲಿ.


ಮುಂದೆ ಮೈಸೂರು ಸರಕಾರದ ಸ್ಟೈಪೆಂಡ್ ಪಡೆದು , ಲಂಡನ್ನಿನ Royal School of Scienceನಲ್ಲಿ ಭೂಗರ್ಭಶಾಸ್ತ್ರ ಅಧ್ಯಯನ ಮಾಡಿ ಏಳು ಪಾರಿತೋಷಕಗಳೊಂದಿಗೆ ಉತ್ತೀರ್ಣರಾದರು. Royal Geological Societyಯು ಅವರಿಗೆ Fellow ಗೌರವವನ್ನು ನೀಡಿತು.ಅಲ್ಲಿಯೇ ಮತ್ತೆ ಕೆಲ ವರ್ಷಗಳನ್ನು ಕಳೆದ ಕೈಲಾಸಂ ಅಲ್ಲಿಯ ಕಾರ್ಮಿಕ ವರ್ಗ, ಫುಟ್ ಬಾಲ್, ಹಾಕಿ, ಬಿಲಿಯರ್ಡ್ಸ್ ಇತ್ಯಾದಿ ಆಟಗಳು, ಇಂಗ್ಲೀಷ್ ನಾಟಕಗಳು ಇತ್ಯಾದಿಗಳ ನಿಕಟ ಸಂಪರ್ಕಕ್ಕೆ ಬಂದರು. ಅವರಿಗೆ ಸಹಜವಾಗಿ ಸಿದ್ಧಿಸಿದ್ದ ಅನುಕರಣ ಕಲೆಯಿಂದ ಇಂಗ್ಲೆಂಡಿನ ಸರ್ರೆ, ಸಸೆಕ್ಸ್ , ಐರ್ಲೆಂಡ್ ಇತ್ಯಾದಿ ವಿವಿಧ ಪ್ರದೇಶಗಳ ಜನಸಾಮಾನ್ಯರ , ಶ್ರೀಮಂತರ, ಕಾರ್ಮಿಕರ ಮಾತನಾಡುವ ವೈಖರಿಗಳನ್ನು ಅನುಕರಿಸಿ ತೋರಿಸುತ್ತಿದ್ದರು. ಅವರ ಈ ಅಣಕವಾಡಿನ ವಿನೋದವನ್ನು ಸವಿಯುವುದಕ್ಕೆ ಅವರ ಸ್ನೇಹಿತರು ಗುಂಪು ಸೇರುತ್ತಿದ್ದರು. ಕೈಲಾಸಂ ಎಂಬ ದಂತಕಥೆಯ ಪ್ರಾರಂಭ ಆಗತೊಡಗಿತ್ತು. ಅದರೊಂದಿಗೇ , ಅಲ್ಲಿಯ ನಾಟಕಮಂದಿರಗಳು, ಮ್ಯೂಸಿಕ್ ಹಾಲುಗಳ ಮೂಲಕ ಅವರಿಗೆ ಆಧುನಿಕ ಇಂಗ್ಲೀಷ್ ರಂಗಭೂಮಿಯ ಒಳನೋಟ ದೊರಕತೊಡಗಿತ್ತು.


ಅಲ್ಲಿಂದ ಮರಳಿ ಭಾರತಕ್ಕೆ ಬಂದದ್ದು ೧೯೧೫ರಲ್ಲಿ. ಅದೇ ವರ್ಷ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ವೊಡೆಯರು ಅವರನ್ನು ಅರಮನೆಗೆ ಬರಮಾಡಿಕೊಂಡು, ಸಂಸ್ಥಾನದ ಜಿಯಾಲಜಿ ಇಲಾಖೆಯಲ್ಲಿ ಗೆಜೆಟೆಡ್ ಹುದ್ದೆಯಲ್ಲಿ ಪ್ರೊಬೇಷನರ್ ಆಗಿ ನೇಮಿಸಿದರು. ಈ ಕೆಲಸದಲ್ಲಿ ಅವರಿದ್ದದ್ದು ಬಹಳ ಸ್ವಲ್ಪ ಕಾಲವಾದರೂ, ನಿಷ್ಠೆಯಿಂದ ಕೆಲಸ ಮಾಡಿದರು. ಕೋಲಾರದ ಚಿನ್ನದ ಗಣಿ ಹತ್ತಿರ ಅಗೆಸುತ್ತಿದ್ದಾಗ , ಕೆಲಸದವರ ಹತ್ತಿರ ನಿಯತ್ತಿನಿಂದ ಕೆಲಸ ತೆಗೆಯುತ್ತಿದ್ದರು. ಅಷ್ಟೇ ಅಲ್ಲ, ಕೆಲಸದ ಸಮಯ ಮುಗಿದ ಮೇಲೆ, ಕಾರ್ಮಿಕರು ಮನೆಗೆ ಹೋಗಿ, ಉಂಡು ಮತ್ತೆ ಕೈಲಾಸಂ ಡೇರೆಯ ಹತ್ತಿರ ಬರುತ್ತಿದ್ದರು. ಅಲ್ಲಿ ಅವರಿಗೆ ಕೈಲಾಸಂ ಇಂಗ್ಲೆಂಡಿನಿಂದ ತಂದ ಗ್ರಾಮಾಫೋನ್ ಪ್ಲೇಟಿನಲ್ಲಿ ಹಾಡು ಕೇಳಿಸುತ್ತಿದ್ದರು. ಕಾರ್ಮಿಕರ ಹತ್ತಿರ ಹಾಡು ಹೇಳಿಸುತ್ತಿದ್ದರು. ಹಾರ್ಮೋನಿಯಂ ಬಾರಿಸುತ್ತಾ ಅವರೊಂದಿಗೆ ಭಜನೆ ಮಾಡುತ್ತಿದ್ದರು. ಪ್ರತಿಷ್ಟಿತ ಮನೆತನ, ಪ್ರತಿಷ್ಟಿತ ಹುದ್ದೆ ಇವು ಯಾವುದೂ ಅವರಿಗೆ ಕಾರ್ಮಿಕರೊಂದಿಗೆ ಒಟ್ಟು ಸೇರಿ ಹಾಡಲಿಕ್ಕೆ ಅಡ್ಡ ಬರಲಿಲ್ಲ.


ಅವರ ನೌಕರಿ ಹೆಚ್ಚು ಕಾಲ ನಡೆಯದೇ, ೧೯೧೯ರಲ್ಲಿ ಹೊರಬಂದರು. ಅಲ್ಲಿಂದ ಮುಂದೆ ಸಾಯುವವರೆಗೂ, ಅವರು ಯಾವುದೇ ನಿಯಮಿತ ಕೆಲಸ ಎಂದು ಮಾಡಿದಂತೆ ಕಾಣುವುದಿಲ್ಲ..ಇಂಗ್ಲೆಂಡಿನ ಓದು, ಒಳ್ಳೆಯ ಕೆಲಸ, ಶ್ರೀಮಂತಿಕೆ ಎಲ್ಲಾ ಇದ್ದ ಕೈಲಾಸಂ ಹಠಾತ್ತನೆ ಕೆಲಸ ಬಿಟ್ಟದ್ದು ಅವರ ಬಂಧುವರ್ಗದವರಿಗೆ ಅಘಾತವನ್ನುಂಟುಮಾಡಿತು. ಮಹಾರಾಜರಿಂದ ದೊರೆತ ಉದ್ಯೋಗವನ್ನು ಬಿಟ್ಟದ್ದಕ್ಕೆ ಬೇಸರಗೊಂಡ , ಶಿಸ್ತಿನ ಮನುಷ್ಯ ಪರಮಶಿವ ಅಯ್ಯರ್ ಮಗನನ್ನು ದೂರಮಾಡಿದರು. ಕೈಲಾಸಂ ಜೀವನದ ದಾರಿಯೇ ಸಂಪೂರ್ಣ ಬದಲಾಯಿತು


ಪಿ.ಕೋದಂಡರಾವ್, ಬಳ್ಳಾರಿ ರಾಘವ ಇತ್ಯಾದಿ ವಿದ್ಯಾವಂತರು ೧೯೦೯ರಲ್ಲಿ Amateur Dramatic Association (ADA) ಎಂಬ ನಾಟಕಮಂಡಳಿಯನ್ನು ಸ್ಥಾಪಿಸಿದ್ದರು. ತಾವು ಕೆಲಸದಲ್ಲಿದ್ದಾಗಲೇ ಕೈಲಾಸಂ ಈ ಮಂಡಳಿಯ ಸದಸ್ಯರಾಗಿ, ರಾಘವರು ಪ್ರದರ್ಶಿಸುತ್ತಿದ್ದ ತೆಲುಗು ನಾಟಕಗಳಲ್ಲಿ ಹಾಸ್ಯಪಾತ್ರಗಳನ್ನು ಮಾಡುತ್ತಿದ್ದರು. ಈ ADA ಮಂಡಳಿಯು ಕನ್ನಡ ನಾಟಕ ಸ್ಪರ್ಧೆಯೊಂದನ್ನು ಏರ್ಪಡಿಸಿತು. ಈಗಾಗಲೇ ಸ್ಕೌಟು ಮಕ್ಕಳಿಗಾಗಿ ಬರೆದಿಟ್ಟಿದ್ದ ನಾಟಕವನ್ನೇ , ಸ್ನೇಹಿತರ ಒತ್ತಡದಿಂದ ಪರಿಷ್ಕರಿಸಿ ಸ್ಪರ್ಧೆಗೆ ಕಳುಹಿಸಿದರು. ಅದಕ್ಕೇ ಬಹುಮಾನ ಬಂತು. ಅದೇ ಅವರ ಪ್ರಸಿದ್ಧ ಟೊಳ್ಳುಗಟ್ಟಿ ನಾಟಕ. ಈ ಬಹುಮಾನದಿಂದ ಕೈಲಾಸಂಗೆ ಪ್ರಸಿದ್ಧಿಯೂ ಬಂತು , ಅವರಿಗೆ ರಂಗಭೂಮಿಯ ಆಸಕ್ತಿಯೂ ಹೆಚ್ಚಿತು. ಕೆಲಸ ಬಿಟ್ಟ ಮೇಲೆ ನಾಟಕ ರಚನೆ, ವಿನೋದಾವಳಿಗಳ ಪ್ರದರ್ಶನ ಅವರ ವೃತ್ತಿಯಾಯಿತು. ಕರೆದ ಕಡೆ ಹೋಗಿ ವಿನೋದಾವಳಿ, ಹಾಸ್ಯಗೀತೆ, ಹಾಗೂ ಹಾಸ್ಯಾಭಿನಯಗಳಿಂದ ಜನರಿಗೆ ಮನರಂಜನೆ ನೀಡುವುದು ಅವರ ಕಾರ್ಯಕ್ರಮವಾಯಿತು. ಪೌರಾಣಿಕ , ಕಂಪನಿ ನಾಟಕಗಳ ಆ ಕಾಲದಲ್ಲಿ , ಸಾಮಾಜಿಕ ವಸ್ತುಗಳ, ಜನಸಾಮಾನ್ಯರ ಭಾಷೆಯನ್ನೇ ಆಡುತ್ತಿದ್ದ ಪಾತ್ರಗಳ , ಅವರ ನಾಟಕಗಳು ಬಹಳ ಜನಪ್ರಿಯವಾದವು.


ಎ.ವಿ.ವರದಾಚಾರ್ಯರ ಸ್ನೇಹದಿಂದ , ಅವರ ರತ್ನಾವಳಿ ನಾಟಕ ಕಂಪನಿಯನ್ನು, ವರದಾಚಾರ್ಯರು ಕಾಹಿಲೆ ಬಿದ್ದಾಗ , ಹಾಗೂ ಮುಂದೆ ತೀರಿಕೊಂಡ ಮೇಲೂ, ಕೈಲಾಸಂ ಸ್ವಲ್ಪಕಾಲ ನಡೆಸಿದ್ದುಂಟು. ಅವರ ಅಮ್ಮಾವ್ರ ಗಂಡ ನಾಟಕ ತಯಾರಾದದ್ದು ಈ ಕಾಲದಲ್ಲಿಯೇ.


೧೯೨೯ರಲ್ಲಿ ವಸಂತಸೇನಾ ಮೂಕಿ ಚಿತ್ರದಲ್ಲಿ ಶಕಾರನ ಪಾತ್ರಕ್ಕೆ ಕೈಲಾಸಂ ಆಯ್ಕೆಯಾದರು. ಒಂದು ರಾತ್ರಿ , ಅದರ ಚಿತ್ರೀಕರಣವನ್ನು ಮುಗಿಸಿಕೊಂಡು , ಗೆಳೆಯರೊಂದಿಗೆ ಬರುತ್ತಿದ್ದಾಗ , ಕಂಟೋನ್ಮೆಂಟಿನ ಮನೆಯೊಂದರಿಂದ ಕೇಳಿ ಬರುತ್ತಿದ್ದ Constantinople ಎಂಬ ಹಾಡಿನಿಂದ ಸ್ಪೂರ್ತಿಗೊಂಡ ಕೈಲಾಸಂ ಅದೇ ಕ್ಷಣದಲ್ಲಿ, ಅದೇ ಮಟ್ಟಿನಲ್ಲಿ ಕೋ-ಓಓಳೀಕೆ ರಂಗಾ ಹಾಡನ್ನು ರಚಿಸಿದರೆಂದು ಹೇಳುತ್ತಾರೆ.


ಕೈಲಾಸಂ ತಮ್ಮ ಬಹುತೇಕ ಕೃತಿಗಳನ್ನು ರಚಿಸಿದ್ದು ೧೯೧೯ರಿಂದ ೧೯೩೫ರ ಕಾಲಾವಧಿಯಲ್ಲಿ. ಟೊಳ್ಳುಗಟ್ಟಿ ಬರೆದ ಎರಡು ದಶಕದೊಳಗೆ ಅವರು ಕನ್ನಡ ನಾಡಿನ ಪ್ರಸಿದ್ಧ ನಾಟಕಕಾರರಾಗಿದ್ದರು.೧೯೪೧ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೈಲಾಸಂ ಕಾವ್ಯೋತ್ಸವ ನಡೆಸಿತು. ಅಲ್ಲಿನ ಭಾಷಣಗಳನ್ನು ಸಂಗ್ರಹಿಸಿ ಕನ್ನಡ ನುಡಿ ಪತ್ರಿಕೆ ಕೈಲಾಸಂ ಪತ್ರಿಕೆಯನ್ನು ಹೊರತಂದಿತು.


ಅನಿರ್ದಿಷ್ಟ ಜೀವನ ನಡೆಸುತ್ತಿದ್ದ ಕೈಲಾಸಂರವರಿಗೆ ತಮ್ಮ ವಿನೋದಾವಳಿಗಳಿಂದ ಬರುತ್ತಿದ್ದ ಆದಾಯ, ಆಹ್ವಾನಿಸಿದ ಜನ ನೀಡುತ್ತಿದ್ದ ಆತಿಥ್ಯ, ಸ್ನೇಹಿತರ ಆದರ ಇವೇ ಜೀವನಕ್ಕೆ ಆಧಾರವಾಗಿತ್ತು. ಮುಂದೆ ಅವರ ಪುಸ್ತಕದ ರಾಯಲ್ಟಿ ಸಂದಾಯವಾಗತೊಡಗಿತು. ಆದರೂ, ಕೈಲಾಸಂಗೆ ಹಣ ಮಾಡಬೇಕೆಂಬ ಪ್ರವೃತ್ತಿಯೇ ಇರಲಿಲ್ಲ.


ಕೈಲಾಸಂ ಮಾತಿನ ಮೋಡಿಗೆ, ಪ್ರತಿಭೆಗೆ ಮಾರುಹೋದ ಒಂದು ಗೆಳೆಯರ ಗುಂಪೇ ಸೃಷ್ಟಿಯಾಯಿತು. ಕೆ.ವಿಅಯ್ಯರ್, ಎಂ.ಶಿವರಾಂ (ರಾಶಿ), ಬಿ.ಎಸ್.ವೆಂಕಟರಾಮ್, ಬಿ.ಎಸ್ ರಾಮರಾವ್ ಇವರಲ್ಲಿ ಕೆಲವರು. ಅವರ ತಮಾಷೆಯ ಮಾತಷ್ಟೇ ಅಲ್ಲದೇ ಅವರ ಅಪಾರಜ್ಞಾನ, ವಾಕ್ಶಕ್ತಿ ಹಾಗು ಪ್ರತಿಭೆಯಿಂದ ಆಕರ್ಷಿತರಾದ ಅನೇಕರು ಅವರ ಸಹವಾಸದಲ್ಲಿ, ಅವರು ಹೇಳಿದ ನಾಟಕಗಳನ್ನು ಬರೆದುಕೊಳ್ಳುವುದರಲ್ಲಿ ಊಟ ನಿದ್ದೆ ಬಿಟ್ಟು ನಿರತರಾಗಿದ್ದರು.


ಅವರ ಪಾಂಡಿತ್ಯ ಬರಿಯ ನಾಟಕಕ್ಕೇ ಸೀಮಿತವಾಗದೆ, ಇತಿಹಾಸ, ಧರ್ಮಶಾಸ್ತ್ರ , ವೇದಾಂತ, ಸಂಗೀತ ಇತ್ಯಾದಿಗಳಿಗೂ ಹಬ್ಬಿತ್ತು. ಮಾತೃಭಾಷೆ ತಮಿಳು, ನೆಚ್ಚಿನ ಭಾಷೆ ಕನ್ನಡ, ಇಂಗ್ಲೀಷ್ ಅಲ್ಲದೇ, ಮಲಯಾಳಂ, ತೆಲುಗು, ಸಂಸ್ಕೃತ, ಉರ್ದು ಭಾಷೆಗಳಲ್ಲಿ ಯೂ ಅವರಿಗೆ ಪ್ರಭುತ್ವವಿತ್ತು.. ಹಾರ್ಮೋನಿಯಂ , ಬುಲ್ ಬುಲ್ ತರಂಗ್ ವಾದ್ಯಗಳನ್ನು ಬಾರಿಸುತ್ತಿದ್ದರು.


ಕೈಲಾಸಂ ಸ್ವತಃ ಪ್ರಸಿದ್ಧಿಯನ್ನಾಗಲೀ, ಪ್ರಚಾರವನ್ನಾಗಲೀ ಬಯಸಿದವರಲ್ಲ. ೧೯೪೫ರಲ್ಲಿ ಮದರಾಸು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅವರನ್ನು ಅಧ್ಯಕ್ಷರನ್ನಾಗಿ ಆರಿಸಿದಾಗ , ತನ್ನಂಥಾ ಸಾಮಾನ್ಯನಿಗೆ ಈ ಗೌರವ ಯಾಕೆ ಎಂದು ಕೇಳಿದ್ದರಂತೆ.


ಕೈಲಾಸಂ ಕೊನೆಯದಿನಗಳು ಸುಖದಾಯಕವಾಗಿರಲಿಲ್ಲ. ಮದರಾಸಿನಿಂದ ಅವರು ಮುಂಬಯಿಗೆ ಹೋದರು. ಅಲ್ಲಿದ್ದಾಗಲೇ ಅವರ ಆರೋಗ್ಯ ಬಹಳ ಕೆಟ್ಟಿತ್ತು. ಜೀವನದ ಬೇಗೆಯಿಂದ ನೊಂದ ಕೈಲಾಸಂ ಬುದ್ಧಿ ಭ್ರಮಣೆಯ ಹಂತಕ್ಕೆ ಬಂದಿದ್ದರು. ಅಲ್ಲಿಂದ ಸಹೃದಯಿಯಬ್ಬರ ನೆರವಿಂದ ಬೆಂಗಳೂರು ತಲುಪಿದ ಕೈಲಾಸಂ , ಅಲ್ಲಿಯೇ ೨೩ ನವೆಂಬರ್ ೧೯೪೬ರಂದು ಕೊನೆಯುಸಿರೆಳೆದರು. ಆಗ ಅವರಿಗೆ ೬೨ ವರ್ಷ.


ಕೃಪೆ:


೧. ಕೈಲಾಸಂ: ಬದುಕು-ಬರೆಹ, ಸಂ: ರಾಮೇಗೌಡ, ಪ್ರಧಾನ ಗುರುದತ್ತ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ ೧೯೮೫


೨. ಕೈಲಾಸಂ ಕೃತಿಗಳು , ಪ್ರಧಾನ ಸಂಪಾದಕ: ಡಾ. ಎಚ್. ತಿಪ್ಪೇರುದ್ರಸ್ವಾಮಿ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ೧೯೮೭


೩. ನಮ್ಮ ಕೈಲಾಸಂ- ನೆನಪಿನ ಸಂಪುಟ, ಸಂ: ಪ್ರೊ. ಚಿ.ಶ್ರೀನಿವಾಸರಾಜು, ಪ್ರಿಸಮ್ ಬುಕ್ಸ್, ೨೦೦೩



Saturday, July 16, 2011

ನನ್ನ ಹಿಂದೂ ದ್ವಂದ್ವ

ನಾನೊಬ್ಬ ಹಿಂದೂ.
ವೇದ ,ಶಾಸ್ತ್ರ ಓದಿಕೊಂಡಂಥ ಸಂಪ್ರದಾಯಸ್ಥ ಕರ್ಮಠ ಹಿಂದೂ ಅಲ್ಲ. ಏನೋ ಅಲ್ಪ ಸ್ವಲ್ಪ ತಿಳಿದುಕೊಂಡು, ಆದಷ್ಟು ಆಗಾಗ ಆಚಾರ ಮಾಡಿಕೊಂಡು ಬದುಕಿರುವವನು.
ನನಗೆ ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿಯ ಜಾಗದಲ್ಲಿ ಮಸೀದಿಯ ಬದಲು ದೇವಸ್ಥಾನ ಇದ್ದರೆ ಚೆನ್ನಾಗಿರುತ್ತದೆ ಅನ್ನಿಸುತ್ತದೆ. ಆದರೆ, ಅದಕ್ಕಾಗಿ ಅಲ್ಲಿರುವ ಮಸೀದಿ ಬಲವಂತವಾಗಿ ಒಡೆಯಬೇಕಾಗಿತ್ತೆ ಎಂಬ ಬಗ್ಯೆ ಅನುಮಾನ ಇದೆ.
ಗೋಧ್ರಾದಲ್ಲಿ ೫೦-೬೦ ಹಿಂದೂಗಳನ್ನು ಕೊಂದದ್ದು ಕೇಳಿ ಬಹಳ ಬೇಜಾರಾಗುತ್ತದೆ. ಆದರೆ ಅದರನಂತರದ ಮತೀಯ ಗಲಭೆ ಬಗ್ಯೆ ಓದಿ ಇನ್ನೂ ಹೆಚ್ಚು ಬೇಜಾರಾಗುತ್ತದೆ. ಅದರ ಬಗ್ಯೆ ಪತ್ರಿಕೆಗಳಲ್ಲಿ ಟಿ.ವಿಯಲ್ಲಿ , ಅದರಲ್ಲೂ ಇಂಗ್ಲೀಷ್ ಭಾಷೆಯವುಗಳಲ್ಲಿ ನೋಡಿ ಹೀಗಾಗಬಾರದಿತ್ತು ಅನ್ನಿಸುತ್ತದೆ. ಆದರೆ, ಅದನ್ನೇ ಮತ್ತೆ ಮತ್ತೆ ಹೇಳುವುದು, ಬರೆಯುವುದು, ತೌಡು ಕುಟ್ಟುವುದು ನೋಡಿ ರಗಳೆಯೂ ಆಗುತ್ತದೆ. ಅದರೊಂದಿಗೇ, ಗೋಧ್ರಾದಲ್ಲಿ ಸತ್ತವರ ಬಗ್ಯೆ ಸುದ್ದಿಯೇ ಬರುವುದಿಲ್ಲವಲ್ಲ ಎಂದು ಸೋಜಿಗವೂ ಆಗುತ್ತದೆ.
ಮಿಷನರಿಗಳ ಮತಾಂತರದ ಬಗ್ಯೆ ಅಸಮಾಧಾನವಾಗುತ್ತದೆ. ಇದರ ಬಗ್ಯೆ ಯಾಕೆ ನಮ್ಮ ಪತ್ರಿಕೆಗಳಲ್ಲಿ ಬರುವುದೇ ಇಲ್ಲವಲ್ಲ ಅಂತ ಮತ್ತೆ ಅಚ್ಚರಿಯಾಗುತ್ತದೆ. ಆದರೆ , ಮಿಷನರಿ ಸಂಸಾರವನ್ನು ಜೀವಂತ ಸುಟ್ಟಾಗ ಛೇ , ಎಂಥಾ ಹೇಯ ಕೆಲಸ ಅಂತ
ಮನಸ್ಸು ಹಳಹಳಿಸುತ್ತದೆ.
ಮಂಗಳೂರಿನಲ್ಲಿ ಪಬ್ಬಿನ ಗಲಭೆ ಓದಿ ಎಂಥಾ ಗೂಂಡಾಗಳು ಈ ಶ್ರೀರಾಮ ಸೇನೆಯವರು ಎಂದು ಸಿಟ್ಟು ಬರುತ್ತದೆ. ಹಿಂದೂ ಸಂಸ್ಕೃತಿಗೆ ಮಸಿ ಬಳಿಯುತ್ತಿದ್ದಾರಲ್ಲಾ ಎಂದು ವ್ಯಥೆಯಾಗುತ್ತದೆ. ಆದರೆ ಟಿವಿ ಛಾನಲ್ಲುಗಳಲ್ಲಿ , ಪತ್ರಿಕೆಗಳಲ್ಲಿ ಅದರ ಬಗ್ಯೆ ಪ್ರತಿಕ್ರಿಯೆ , ಆಕ್ರೋಶ , ಪಬ್ ಭರೋ, ಪಿಂಕ್‌ ಚಡ್ಡಿ ಅಂದೋಲನ ಇತ್ಯಾದಿ ಇತ್ಯಾದಿ ನೋಡಿ , ಇಷ್ಟೆಲ್ಲಾ ದೇಶಾದ್ಯಂತ ಪ್ರತಿಕ್ರಿಯೆ ಮಾಡುವಷ್ಟು ಇದರಲ್ಲಿ ಏನಿತ್ತು ಎಂದು ಅರ್ಥವಾಗುವುದಿಲ್ಲ.
ನಮ್ಮೂರಿನ ಉಸ್ಮಾನ್ ಸಾಬಿ ರಸ್ತೆಯಲ್ಲಿ ಸಿಕ್ಕಿದರೆ, ಇವನೂ ಟೆರರಿಸ್ಟ್ ಆಗಿರಬಹುದು ಅನ್ನಿಸುವುದಿಲ್ಲ. ಹಾಗೆಯೇ ತರಕಾರಿ ಮಾರುವ ಬಾಯಮ್ಮ ಎದುರು ಬಂದರೆ ಮತಾಂತರದ ನೆನಪಾಗುವುದಿಲ್ಲ. ಆದರೆ ಮೊಹರಮ್ಮಿನ ದಿನ ಉಸ್ಮಾನನನ್ನು ತಬ್ಬಿಕೊಂಡು ಹಬ್ಬದ ಸಡಗರದಲ್ಲಿ ಪಾಲುಗೊಳ್ಳಬೇಕು ಅನ್ನಿಸುವುದಿಲ್ಲ. ಎಲ್ಲೋ ಎದುರು ಸಿಕ್ಕಿದರೆ ಈದ್ ಮುಬಾರಕ್ ಹೇಳಬಹುದು , ಅಥವಾ ಬಾಯಮ್ಮ ಆದರೆ, “ಏನು ಬಾಯಮ್ಮ ಕ್ರಿಸ್ಮಸ್ ಹಬ್ಬ ಜೋರಾ" ಅಂತ ಕುಶಾಲು ಮಾಡಬಹುದು. ಅಷ್ಟೇ.
ಒಟ್ಟಿನಲ್ಲಿ ಅವರಷ್ಟಕ್ಕೆ ಅವರನ್ನು ಬಿಟ್ಟು ನಮ್ಮಷ್ಟಕ್ಕೆ ನಾವಿರಿವುದು ನನಗೆ ಸಾಕು. ನನ್ನ ಅವರ ವ್ಯವಹಾರಗಳಲ್ಲಿ ಅವರ ಧರ್ಮ ಅಡ್ಡಬರುವುದಿಲ್ಲ. ಆದರೆ , ಮೇಲೆ ಬಿದ್ದು ಸಲಿಗೆ ಮಾಡುವುದೂ ಇಲ್ಲ, ಯಾಕೆಂದರೆ ಅವರು "ನಮ್ಮ ಥರಾ ಅಲ್ಲ"
ಆದರೆ ನನಗೆ ಈಗೀಗ ಹೀಗಿರಲಿಕ್ಕೆ ಬಹಳ ಕಷ್ಟವಾಗುತ್ತಿದೆ. ನಾನು ಮತಾಂತರದ ವಿರುದ್ಧ ಮಾತಾಡಿದರೆ ನಾನು ಬಿಜೆಪಿ ಭಂಟ, ಭೈರಪ್ಪನವರ ಚೇಲಾ ಅಂತ ಜನರಿಗೆ ಗುಮಾನಿ ಬರುತ್ತದೆ. ಹಾಗೇ ಗುಜರಾತಿನಲ್ಲಿ ದಂಗೆ ಆಗಬಾರದಿತ್ತು ಅಂದರೆ , ಇವನ್ಯಾರೋ ಕಾಂಗ್ರೆಸ್ಸಿನವನೋ, ಕಮ್ಯೂನಿಸ್ಟನೋ ಬಂದ ಅನ್ನುತ್ತಾರೆ.
ಒಟ್ಟಿನಲ್ಲಿ ನಾನು ಒಂದೋ ಆ ಬಣದವನು ಇಲ್ಲ ಈ ಬಣದವನು. ಮಧ್ಯದಲ್ಲಿ ಜಾಗವೇ ಇಲ್ಲ !. ಗಡಿಯಾರದ ಪೆಂಡ್ಯುಲಮ್ಮಿನಂತೆ ಒಮ್ಮೆ ಅತ್ತ , ಒಮ್ಮೆ ಇತ್ತ ಜೀಕಲೇ ಬೇಕು. ಮಧ್ಯ ನಿಲ್ಲುವಂತಿಲ್ಲ.
ಜಾರ್ಜ್ ಬುಶ್ ಹೇಳಿದಂತೆ "If you are not with us, you are against us". ಅರ್ಥಾತ್ ನೀನು ಬೀಜೇಪಿ ಅಲ್ಲ ಅಂದರೆ ಕಾಂಗ್ರೆಸ್ ಆಗಿರಲೇ ಬೇಕು. ಹಿಂದೂಗಳನ್ನು ಟೀಕಿಸದೆ ಬುದ್ಧಿಜೀವಿ/ ಸೆಕ್ಯುಲರ್‍ ಆಗಲು ಸಾಧ್ಯವಿಲ್ಲ. ಶಿವಸೇನೆ, ಆರ್‍ ಎಸ್ ಎಸ್ , ಬೀಜೇಪಿ ಗಳನ್ನು ಟೀಕಿಸುವವ ಒಳ್ಳೆಯ ಹಿಂದೂ ಆಗಲು ಸಾಧ್ಯವಿಲ್ಲ.
ತಟಸ್ಥ ನೀತಿಯ ಕಾಲ ಎಂದೋ ಹೊರಟುಹೋಗಿದೆ ಅಂತ ಅನ್ನಿಸುತ್ತಿದೆ.
ನಾನ್ಯಾಕೆ ದೇವಸ್ಥಾನಕ್ಕೆ ಹೋಗುವ ಆದರೆ ಮುಸ್ಲಿಮರನ್ನು ದ್ವೇಷಿಸದ, ಬೀಜೇಪಿ ಒಲ್ಲದ ಆದರೆ ಕಾಂಗ್ರೆಸ್ಸಿಗೂ ಸಲ್ಲದ , ಪ್ರತಿಯೊಂದು ವಿಷಯವನ್ನೂ ಅದರ merit ಮೇಲೆ ನಿರ್ಧರಿಸುವ ಸರ್ವಸಾಧಾರಣ ಮನುಷ್ಯ ಆಗಿರಬಾರದು ?
ಅಲ್ಲವೇ?

Tuesday, March 1, 2011

ಪಾಚಿ ಕಟ್ಟಿದ ಪಾಗಾರ : ಒಂದು ಅನಿಸಿಕೆ


ಪಾಚಿ ಕಟ್ಟಿದ ಪಾಗಾರ:

ಕಾದಂಬರಿ

ಮಿತ್ರಾ ವೆಂಕಟ್ರಾಜ

ಮನೋಹರ ಗ್ರಂಥಮಾಲಾ,ಧಾರವಾಡ

ಪಾಚಿ ಕಟ್ಟಿದ ಪಾಗಾರ ಕಾದಂಬರಿಯ ಕಾಲಮಾನ ೧೯೪೦ರ ಮಧ್ಯಭಾಗದಿಂದ ೧೯೭೦ರ ಮೊದಲ ವರ್ಷಗಳವರೆಗೆ - ಒಟ್ಟಿನಲ್ಲಿ ಸುಮಾರು ಮೂರು ದಶಕಗಳು. ಕುಂದಾಪುರ ಸೀಮೆಯಲ್ಲಿನ ಬ್ರಾಹ್ಮಣ ಸಮುದಾಯದ ಸಾಮಾಜಿಕ ಸಂದರ್ಭದ ಹಿನ್ನೆಲೆಯಲ್ಲಿ ನಡೆಯುವ ಈ ಕಾದಂಬರಿಯ ಕೇಂದ್ರ ಬಿಂದುಗಳು ಪಾರ ಎಂಬ ಹೆಣ್ಣು ಮತ್ತು ಕೆಮ್ಮಾಡಿ ಮನೆ ಎಂಬ ಜಮೀನುದಾರಿ ಮನೆತನ. ಇವೆರಡರ ಕಥಾನಕಗಳೂ ಸಮಾನಾಂತರವಾಗಿ ಶುರುವಾದರೂ, ಮುಂದೆ ಒಂದುಗೂಡಿ ಮುಂದುವರಿಯುತ್ತದೆ.

ಜೀವನದಲ್ಲಿ ಸಂಭವಿಸುವ ಕಷ್ಟಕೋಟಲೆಗಳು , ಸುಖದುಃಖಗಳು, ಹುಟ್ಟುಸಾವುಗಳು ಇವುಗಳ ಜೊತೆಜೊತೆಯಾಗಿಯೇ ದೂರದ ಹೊರಜಗತ್ತಿನ ವಿದ್ಯಮಾನಗಳ ಹಾಗೂ ಅವುಗಳ ಪ್ರತ್ಯಕ್ಷ ಅಥವಾ ಪರೋಕ್ಷ ಪ್ರಭಾವ ಇವುಗಳನ್ನು ಪಾರ ಮತ್ತು ಕೆಮ್ಮಾಡಿ ಮನೆತನ ಎದುರಿಸುವ ,ಇವಕ್ಕೆ ಪ್ರತಿಕ್ರಿಯಿಸುವ, ಕೆಲವೊಮ್ಮೆ ಗೆಲ್ಲುವ, ಕೆಲವೊಮ್ಮೆ ಸೋಲುವ ಪ್ರಕ್ರಿಯೆಯೇ ಪಾಚಿ ಕಟ್ಟಿದ ಪಾಗಾರದ ಕಥಾವಸ್ತು. ಪಾರಳೆಂಬ ಕಿರುನಾವೆ ಮತ್ತು ಕೆಮ್ಮಾಡಿ ಮನೆಯೆಂಬ ಹಡಗು ಇವೆರಡೂ ಜೀವನವೆಂಬ ಸಾಗರದಲ್ಲಿ ಬಂದೊದಗುವ ಅಲ್ಲೋಲಕಲ್ಲೋಲಗಳನ್ನು ತಮ್ಮದೇ ಆದ ರೀತಿಯಲ್ಲಿ ನಿಭಾಯಿಸುತ್ತವೆ.

ಸಣ್ಣವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಪಾರಳನ್ನು ಹೊಟ್ಟೆಬಟ್ಟೆ ಕಟ್ಟಿ ಅವಳ ಬಡತಾಯಿ ಬೆಳೆಸುತ್ತಾಳೆ. ಹುಟ್ಟಿನಿಂದಲೇ ಕೈ ಹಿಡಿದ ಈ ಬಡತನ , ಕಷ್ಟಕೋಟಲೆಗಳು ಪಾರಳನ್ನು ಕಾದಂಬರಿಯುದ್ದಕ್ಕೂ ಕಾಡುತ್ತವೆ. ಕೆಮ್ಮಾಡಿ ಮನೆ ಹೊಕ್ಕ ಮೇಲೆ ಪಾರಳಿಗೆ ಸಿಗುವ ನೆಮ್ಮದಿ ಕೂಡಾ ಕೆಲ ಸಮಯದಲ್ಲಿಯೇ ಮತ್ತೆ ಭಗ್ನವಾಗುತ್ತದೆ.

ಕೆಮ್ಮಾಡಿ ಮನೆ ತಲೆತಲಾಂತರದಿಂದ ನಡೆದುಕೊಂಡು ಬಂದ ಆಢ್ಯ , ಶ್ರೀಮಂತ, ಜಮೀನುದಾರೀ ಕುಟುಂಬ. ಪಾರಳಿಗೆ ಹೊಟ್ಟೆಪಾಡೇ ಸವಾಲಾದರೆ ಕೆಮ್ಮಾಡಿ ಮನೆಗೆ ತಮ್ಮ ಜಮೀನು, ಆಳುಕಾಳುಗಳು, ಪೋಲೀಸು, ಕೋರ್ಟು-ಕಛೇರಿಗಳು, ಮನೆಯ ಬೃಹತ್ ವಹಿವಾಟುಗಳು ಇವುಗಳನ್ನು ನಿಭಾಯಿಸಿಕೊಂಡು ಹೋಗುವುದು ಸವಾಲು.

ಹೊರಜಗತ್ತು ಸಾಮಾಜಿಕವಾಗಿಯೂ, ರಾಜಕೀಯವಾಗಿಯೂ ಬದಲಾಗುತ್ತಿದೆ.ಆದರೆ ಸ್ವಾರಸ್ಯವೆಂದರೆ ಈ ಬದಲಾವಣೆಯ ಪ್ರಸ್ತಾಪ ಕಾದಂಬರಿಯಲ್ಲಿ ಆಗಾಗ ಬಂದರೂ , ಅದು ಹೀಗೆ ಬಂದು ಹಾಗೆ ಹೋಗುವ ತಂಗಾಳಿಯಂತೆ ಇದ್ದು , ಕಥೆಯ ಮುಖ್ಯ ವಾಹಿನಿಯಲ್ಲಿ ಸೇರುವುದಿಲ್ಲ. ನಾರಾಯಣ ಗುರುಗಳ ಬೋಧನೆಗಳು, ಶಾರದಾ ಆಕ್ಟ್, ಎರಡನೆಯ ಮಹಾಯುದ್ಧ, ಸ್ವಾತಂತ್ರ್ಯ ಹೋರಾಟ, ಭಾರತ ಸ್ವತಂತ್ರವಾದದ್ದು, ಕೇರಳದಲ್ಲಿ ಕಮ್ಯೂನಿಸಂ ಪ್ರವೇಶ ಈ ವಿದ್ಯಮಾನಗಳ ಪ್ರಸ್ತಾಪ ಬಹುತೇಕ ಆಗುವುದು ಯಾವುದೋ ಪಾತ್ರಗಳ ಹೇಳಿಕೆಗಳಲ್ಲಿ. ಕಥೆಯ ನಿರೂಪಣೆಯಲ್ಲಿಯೇ ಪ್ರಸ್ತಾಪ ಬಂದಾಗಲೂ ಕೂಡಾ, ಲೇಖಕಿ ಅದನ್ನು ವಿಸ್ತರಿಸುವುದಿಲ್ಲ. ಆದರೂ ಈ ಎಲ್ಲ ಹೊರ ಪ್ರಪಂಚದ ಆಗುಹೋಗುಗಳ ಪರಿಣಾಮ ಮಾತ್ರ ನೇರವಾಗಿ ಕಾಣುತ್ತದೆ. ಗೋವಿಂದ ಶಾಲೆಗೆ ಸೇರುವುದು ನಾರಾಯಣ ಗುರುಗಳ ಪರೋಕ್ಷ ಪ್ರೇರಣೆಯಿಂದ. ಕೃಷ್ಣದೇವರಾಯರು ಮಗಳ ಮದುವೆಯನ್ನು ಮುಂದೆ ಹಾಕುವುದು ಶಾರದಾ ಆಕ್ಟ್ ಬಂದೀತೆಂಬ ನಿರೀಕ್ಷೆಯಲ್ಲಿ. ಯುದ್ಧದಿಂದ ಸಾಮಾನುಗಳ ಬೆಲೆ ಹೆಚ್ಚಳ ಪಾರಳ ಜೀವನವನ್ನು ಇನ್ನಷ್ಟು ಕಂಗಾಲು ಮಾಡುತ್ತದೆ. ಗೋಪಾಲ ಹೈಸ್ಕೂಲು ಸ್ಥಾಪಿಸಲು ಪ್ರೇರಣೆ ಗಾಂಧಿವಾದ.

ಇವಕ್ಕೆ ಒಂದೇ ಒಂದು ಅಪವಾದ ಎಂದರೆ ಕೇರಳದಲ್ಲಿ ಶುರುವಾದ ಭೂಸುಧಾರಣೆ ಮತ್ತು ಉಳುವವನೇ ಭೂಮಿಗೊಡೆಯ ಚಳುವಳಿಗಳು.ಇದರ ಪ್ರಸ್ತಾಪ ಅಲ್ಲಲ್ಲಿ ಬಂದರೂ , ಪುಸ್ತಕದ ಮೊದಲ ಭಾಗದ ಕೊನೆಯಲ್ಲಿ ಇದ್ದಕ್ಕಿದ್ದಂತೆ ಅದು ಢಾಳಾಗಿ ಪ್ರಕಟವಾಗಿ , ಎರಡನೆಯ ಭಾಗದಲ್ಲಿ ಬರಬಹುದಾದ ಅನಿಷ್ಟದ ಸೂಚಕವಾಗುತ್ತದೆ. ಅದರಂತೆಯೇ ಮುಂದೆ ಈ ಚಳುವಳಿ ಒಂದು ಚಂಡಮಾರುತದ ರೂಪ ತಾಳಿ ಮಾಧವನನ್ನು ಪರೋಕ್ಷವಾಗಿ ಬಲಿ ತೆಗೆದುಕೊಂಡು, ಕೆಮ್ಮಾಡಿ ಮನೆಯ ಹಡಗನ್ನು ಒಡೆಯುತ್ತದೆ. ಇದರ ದುರಂತವೆಂದರೆ , ಇದಕ್ಕೆ ಸಂಬಂಧವೇ ಇರದ ಪಾಪದ ಪಾರಳ ಬದುಕೆಂಬ ನಾವೆ, ಈ ಚಳುವಳಿಯ ದೆಸೆಯಿಂದ ಅಲ್ಲೋಲಕಲ್ಲೋಲವಾಗುತ್ತದೆ. ಈ collateral damage ವಿಧಿಯ ಒಂದು ವಿಪರ್ಯಾಸ. ಕಾದಂಬರಿಯ ಕೊನೆಗೆ ಪಾರಳ ಮಕ್ಕಳು ಕೊನೆಗೂ ದಡಮುಟ್ಟಿದಂತೆ ಕಂಡರೂ, ಪಾರಳ ಮನಸ್ಸು ಮಾತ್ರ ಇನ್ನೂ ಅಭದ್ರವಾಗಿ ಹೊಯ್ದಾಡುತ್ತಿರುತ್ತದೆ.

ಕಾದಂಬರಿಗಳಲ್ಲಿ ಪಾತ್ರಗಳು ಮಾತಾಡುವಾಗ ಆಯಾ ಪ್ರಾದೇಶಿಕ ಭಾಷೆ ಬಳಸುವುದರಿಂದ ಕಾದಂಬರಿಯ authenticity ಹೆಚ್ಚಾಗುತ್ತದೆ, ಅದಕ್ಕೊಂದು ಆತ್ಮೀಯತೆ ಪ್ರಾಪ್ತವಾಗುತ್ತದೆ. ಆದರೆ ಇದರಲ್ಲಿಯ ಅಪಾಯ ಅಂದರೆ ಆಯಾ ಪ್ರದೇಶದ ಭಾಷೆಯ ಅರಿವಿಲ್ಲದ ಕನ್ನಡ ಓದುಗರಿಗೆ ಇದು ಅರ್ಥವಾಗದೆ ಹೇವರಿಕೆಯಾಗಬಹುದು, ಕಾದಂಬರಿಯ ರಸಾಸ್ವಾದನೆಗೆ ಭಂಗ ಬರಬಹುದು. ಆದ್ದರಿಂದ ಇದರಲ್ಲಿ ಒಂದು ಮಿತಿ ಮತ್ತು ಸಮತೋಲನ ಮುಖ್ಯ. ಲೇಖಕಿ ಈ ಪುಸ್ತಕದಲ್ಲಿ ಕುಂದಾಪುರದ ಪ್ರಾದೇಶಿಕ ಕನ್ನಡ ಭಾಷೆ, ಕೆಲವೊಮ್ಮೆ ತುಳು ಕೂಡಾ, ಬಳಸಿದ್ದರೂ, ಅದು ಕಥೆಯ ಓಟಕ್ಕೆ ಪೂರಕವಾಗಿದೆಯೇ ಹೊರತು ಮಾರಕವಾಗಿಲ್ಲ.

ಈ ಕಾದಂಬರಿಯಲ್ಲಿಯ ಅನೇಕ ಸಂಬಂಧಗಳಲ್ಲಿ ಒಂದಕ್ಕಿಂತ ಹೆಚ್ಚು ಆಯಾಮಗಳಿದ್ದು, ಸಂಕೀರ್ಣವಾಗಿವೆ. ಇದರ ಅನೇಕ ಉದಾಹರಣೆಗಳನ್ನು ನೋಡಬಹುದು. ಪಾರಳ ಅಮ್ಮ ಮೀನಾಕ್ಷಿ ಒಬ್ಬಳೇ ಮಗಳೆಂದು ಪಾರಳನ್ನು ಮುಚ್ಚಟೆಯಿಂದ ಸಾಕಿದರೂ, ಒಂದು ಮುದ್ದು ಮಾತಿನಿಂದ ಮಗಳನ್ನು ಕರೆದವಳಲ್ಲ. ನಲ್ಮೆಯ ನುಡಿಗಳಿಗಿಂತ ಬೈಗುಳಗಳು, ಪೆಟ್ಟು ಇವನ್ನು ತಿಂದದ್ದೇ ಹೆಚ್ಚು. ಹಾಗೆಂದು ಮಗಳು ಒಂದು ಗಳಿಗೆ ಕಣ್ಣಿಂದ ಮರೆಯಾದರೂ ಈ ಸುಟ್ಟವಳು ಎಲ್ಲಿ ಹೋದಳಪ್ಪ ಎಂಬ ಹುಡುಕಾಟ ಆತಂಕ ಶುರುವೇ.

ಮಾಧವ ಕೆಟ್ಟ ದಾರಿಗಿಳಿದು, ತಂದೆಯ ಮೇಲೆ ತಿರುಗಿಬೀಳುತ್ತಾನೆ. ಮನೆಯಲ್ಲಿಯೇ ಇದ್ದರೂ ತಂದೆಯ ಕಣ್ಣಿಗೆ ಬೀಳದೆ ಓಡಾಡುತ್ತಾನೆ. ಆದರೂ ಅದೇ ತಂದೆ , ಮರಣಶಯ್ಯೆಯಲ್ಲಿದ್ದಾಗ ಅವನಿಗೆ ಕಣ್ಣೀರು ಬರುತ್ತದೆ. ಆತ ತಂದೆಯ ಶುಶ್ರೂಷೆಗೆ ಧಡಪಡಿಸುತ್ತಾನೆ. ಮನೆ ನಡೆಸುವ ಪ್ರಕ್ರಿಯೆಯಲ್ಲಿ ಮೆಲ್ಲಗೆ ತೊಡಗುತ್ತಾನೆ.

ಇಂಥದ್ದೇ ಸಂಕೀರ್ಣತೆ ಮಾಧವ - ಸೀತಾರಾಮನ ಸಂಬಂಧದಲ್ಲಿಯೂ ಕಾಣುತ್ತದೆ. ಮಾಧವನಿಗೆ ಸೀತಾರಾಮ ತಮ್ಮನೆಂಬ ಸಹಜ ಮಮಕಾರವಂತೂ ಇದೆ. ಇಬ್ಬರ ಮಧ್ಯೆ ವಯಸ್ಸಿನ ಅಂತರ ಇರುವುದರಿಂದ ಹಾಗೂ ಮಾಧವ ಮನೆಯ ಯಜಮಾನನೂ ಆಗಿರುವುದರಿಂದ , ಆತ ಸೀತಾರಾಮನತ್ತ ತಂದೆಯ ದೃಷ್ಟಿಯಿಂದಲೂ ನೋಡುತ್ತಾನೆ. ಆದರೆ ಇದರೊಂದಿಗೇ , ಸೀತಾರಾಮ ನಾಳೆ ಆಸ್ತಿಯಲ್ಲಿ ಪಾಲು ಬೇಡುವ ತನ್ನ ದಾಯವಾದಿ ಎನ್ನುವ ಲೌಕಿಕ ಪ್ರಜ್ಞೆಯೂ ಆತನಲ್ಲಿ ಜಾಗೃತವಾಗಿದೆ. ಮಾಧವ - ಅನಂತಯ್ಯನ ಸಂಬಂಧ ಸೋದರಮಾವ- ಸೋದರಳಿಯನದೋ, ಗೆಳೆತನದ್ದೋ ಅಥವಾ ಧಣಿ-ತೈನಾತಿಯದ್ದೋ? ಇವೆಲ್ಲ ಮುಖಗಳೂ ಅವರ ನಡವಳಿಕಗಳಲ್ಲಿ ಕಂಡುಬರುತ್ತವೆ.

ಕಾದಂಬರಿಯ ಸ್ತ್ರೀ-ಪುರುಷ ಪಾತ್ರಗಳಲ್ಲಿ ಒಂದು ಕುತೂಹಲಕಾರೀ ಭಿನ್ನತೆ ಕಾಣುತ್ತದೆ. ಇಲ್ಲಿಯ ಸ್ತ್ರೀ ಪಾತ್ರಗಳು ಗಟ್ಟಿಪಾತ್ರಗಳು. ಇವರು ಜೀವನವನ್ನು ಕೆಚ್ಚಿನಿಂದ ಎದುರಿಸುವವರು. ಎಷ್ಟೇ ಕಷ್ಟ ಬಂದರೂ ಹತಾಶೆಯಿಲ್ಲ. ಜೀವನ ವಿಮುಖತೆ ಇಲ್ಲ. ಗಂಡನನ್ನು ಕಳೆದುಕೊಂಡ ಪಾರಳಿಗೆ ತೌರಿನಲ್ಲಿಯೂ, ಗಂಡನ ಮನೆಯಲ್ಲಿಯೂ ಆಶ್ರಯ ಸಿಗದಾಗ, ನಾಲ್ಕು ಸಣ್ಣ ಮಕ್ಕಳನ್ನು ಕಟ್ಟಿಕೊಂಡ ಆಕೆ ತಕ್ಷಣವೇ ಕೆಲವು ಪಾತ್ರೆ ಮಾರಿ ಐದು ರೂಪಾಯಿ ಹೊಂದಿಸಿಕೊಳ್ಳುತ್ತಾಳೆ. ಎಂಟಾಣೆ ಬಾಡಿಗೆಗೆ ಯಾರದ್ದೋ ಕೊಟ್ಟಿಗೆಯ ಭಾಗವನ್ನು ತೆಗೆದುಕೊಂಡು, ಮಗನೊಡಗೂಡಿ ಮಣ್ಣಿನ ಗೋಡೆ ಕಟ್ಟಿಕೊಳ್ಳುತ್ತಾಳೆ. ಮುಂದೆ, ಮಕ್ಕಳನ್ನು ಸಾಕುವುದು ದುರ್ಭರವಾದಾಗ, ಮೂವರನ್ನು ಅನಾಥಾಶ್ರಮಕ್ಕೆ ಸೇರಿಸುತ್ತಾಳೆ. ಈ ಯಾವ ಸಂದರ್ಭದಲ್ಲಿಯೂ ಆತ್ಮಹತ್ಯೆಯಂತಹ ಜೀವನ ವಿಮುಖ ಯೋಚನೆ ಅವಳ ಮನಸ್ಸಿನಲ್ಲಿ ಸುಳಿಯುವುದಿಲ್ಲ. ಈ ದೃಷ್ಟಿಯಿಂದ ಪಾರಳ ಜೀವನ ಮರಳಿ ಮಣ್ಣಿಗೆಯ ಪಾರೋತಿ ಮತ್ತು ಗೃಹಭಂಗದ ನಂಜಮ್ಮನನ್ನು ನೆನಪಿಗೆ ತರುತ್ತದೆ.

ಬಾಕಿ ಸ್ತ್ರೀ ಪಾತ್ರಗಳೂ ಹಾಗೆಯೇ. ಗಂಡ ಸತ್ತಾಗ ಸುಮಾರು ನಲವತ್ತು ಸಾವಿರ ರೂಪಾಯಿಯ (ಆ ಕಾಲದ) ಸಾಲ ಹೊತ್ತುಕೊಂಡ ಸೀತಮ್ಮ ಐದಾರುವರ್ಷದೊಳಗೆ ಸಾಲವನ್ನು ಸಂಪೂರ್ಣವಾಗಿ ತೀರಿಸಿ ಮನೆ ಉಳಿಸುತ್ತಾಳೆ. ಲಕ್ಶ್ಮೀದೇವಮ್ಮ ಒಂದರ ಹಿಂದೊಂದು ಮಕ್ಕಳನ್ನು ಕಳೆದುಕೊಂಡು ನೊಂದರೂ, ಮಾಧವನ ದರ್ಪದಿಂದ ಕಸಿವಿಸಿಗೊಂಡರೂ, ಕೆಮ್ಮಾಡಿ ಮನೆಯಲ್ಲಿ ಕಲ್ಲು ಕಂಭದಂತೆ ಸ್ಥಿರವಾಗಿ ನಿಂತು ಮುನ್ನಡೆಸುತ್ತಾಳೆ. ಮಾಧವನ ಅಂತಃಪ್ರಜ್ಞೆಯ ಕಾವಲು ಕಾಯುತ್ತಾಳೆ. ಮುಂದೆ ಮುದುಕಿಯಾಗಿ, ಬೆನ್ನು ಬಗ್ಗಿದ್ದರೂ, ಪಾರಳ ಮನೆಯ ಗೃಹಪ್ರವೇಶಕ್ಕೆ ಕಾರು ಮಾಡಿಕೊಂಡಾದರೂ ಹೋಗುವ ಜೀವನೋತ್ಸಾಹ ತೋರಿಸುತ್ತಾಳೆ. ಇದೇ ಪರಂಪರೆಯ ಮುಂದಿನ ಪೀಳಿಗೆಯ ಕಮಲಿ ಭೂಸುಧಾರಣೆಯಲ್ಲಿ ಬಹಳಷ್ಟು ಜಮೀನು ಹೋದರೂ, ಮನೆಯ ಯಜಮಾನಿಕೆ ವಹಿಸಿ ಸ್ವಂತ ಕೈಗಳಿಂದ ದುಡಿದು ಮನೆ ನಿಭಾಯಿಸುತ್ತಾಳೆ. ಇದಕ್ಕೆ ಅಪವಾದವಾದ ಶಂಕರಿ ಕೂಡಾ ತನ್ನ ಘನತೆ, ನಂಬಿಕೆಯನ್ನು ಉಳಿಸಿಕೊಳ್ಳುವುದಕ್ಕೋಸ್ಕರವೇ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಸತ್ತರೂ ಗೌರವ ಉಳಿಸಿಕೊಳ್ಳುತ್ತಾಳೆ.

ಪುರುಷ ಪಾತ್ರಗಳಲ್ಲಿ ಇಂಥಾ ಗಟ್ಟಿತನ ಕಾಣುವುದಿಲ್ಲ. ಮಗ ಕೆಟ್ಟುಹೋದ ಎಂಬ ಕೊರಗಿನಲ್ಲಿ ಹಾಸಿಗೆ ಹಿಡಿದ ಕೃಷ್ಣದೇವರಾಯರು ಮೇಲೇಳುವುದೇ ಇಲ್ಲ. ಮಾಧವನ ದರ್ಪದ ಹಿಂದಿನ ಶಕ್ತಿ ಸ್ವಯಂಘಾತಕ ಪ್ರವೃತ್ತಿಯ ರಾಜಸವೇ ಹೊರತು ಸಾತ್ವಿಕವಲ್ಲ. ಸೀತಾರಾಮ ಚಿತ್ರ ಬರೆದುಕೊಂಡಿರುವ ಭಾವನಾ ಪ್ರಪಂಚದ ಮನುಷ್ಯ- ಇದರ ಬಗ್ಯೆ ಅವನ ಹೆಂಡತಿಗೇ ಬೇಸರವಿದೆ. ಅನಂತಯ್ಯನಂತೂ ಗಾಳಿ ಬಂದಾಗ ತೂರಿಕೊಳ್ಳುವವನು. ಗಾಂಧೀವಾದಿ ಸದಾನಂದ ಕೂಡಾ ಸ್ವತಂತ್ರ ಬಂದ ಮೇಲಿನ ವಿದ್ಯಮಾನಗಳಿಂದ ಹತಾಶನಾಗಿ ಅನಾಥಾಶ್ರಮ ಮುಚ್ಚುವ ನಿರ್ಧಾರ ಮಾಡುತ್ತಾನೆ. ಇದ್ದುದರಲ್ಲಿ ಗೋಪಾಲನೇ ಅಡ್ಡಿಯಿಲ್ಲವಾದರೂ ಆತನು ಬೇಗ ಸಾಯುವುದರಿಂದ ಆತನ ಪಾತ್ರ ಸೀಮಿತವಾಗಿದೆ.

ಚೊಚ್ಚಲ ಕಾದಂಬರಿಯಾದರೂ ಲೇಖಕಿ, ಭಾಷೆಯ ಬಳಕೆಯಲ್ಲಿ, ನಿರೂಪಣೆಯಲ್ಲಿ ತೋರಿಸಿರುವ ಸಂಯಮ ಮತ್ತು ಶಿಸ್ತು ಅಪರೂಪವಾದದ್ದು. ಶಂಕರಿಯ ಮತ್ತು ಮಾಧವನ ಸಾವು, ಲಚ್ಚನ ದುರಂತದಿಂದ ಪಾರನ ಮೇಲಾಗುವ ಪರಿಣಾಮ ಈ ರೀತಿಯ ಭಾವೋತ್ಕಟ ಘಟನೆಗಳನ್ನು ನಿರೂಪಿಸುವಾಗಲೂ ಅವರ ಭಾಷೆ ಹಿಡಿತ ತಪ್ಪುವುದಿಲ್ಲ. ನಿರೂಪಣೆ ಅಳತೆ ಮೀರುವುದಿಲ್ಲ. ಒಂದನೇ ಭಾಗಕ್ಕೂ , ಎರಡನೆಯ ಭಾಗಕ್ಕೂ ಬೇರೆಯೇ ಓಟವಿದೆ, ಧ್ವನಿಯಿದೆ. ಮೊದಲನೆಯ ಭಾಗದಲ್ಲಿ ವಸ್ತು ಸ್ಥಿತಿಯ ನಿರ್ಲಿಪ್ತ ನಿರೂಪಣೆಯಿದ್ದರೆ, ಎರಡರಲ್ಲಿ, ಮೊದಮೊದಲು ಅನಕೃ ಕಾದಂಬರಿಗಳಲ್ಲಿಯ ರಮ್ಯತೆಕಂಡರೂ ಬರಬರುತ್ತಾ ದುರಂತಮಯವಾದ ಚಿತ್ರಣ ಕಾಣುತ್ತದೆ.

ಒಟ್ಟಿನಲ್ಲಿ ಪಾಚಿ ಕಟ್ಟಿದ ಪಾಗಾರ ಈಚೆಗೆ ಬಂದಿರುವ ಕನ್ನಡ ಕಾದಂಬರಿಗಳಲ್ಲಿ, ನಾಲ್ಕು ಕಾಲ ನಿಲ್ಲುವಂತಹಾ ಪುಸ್ತಕ. ಏಳೆಂಟು ವರ್ಷಗಳ ಮಹತ್ವಾಕಾಂಕ್ಷಿ ಪ್ರಯತ್ನದ ಫಲವಾದ ಈ ಕೃತಿ ಓದುಗರಿಗೆ ಒಂದು ಒಳ್ಳೆಯ ಓದಿನ ಅನುಭವವನ್ನು ನೀಡುತ್ತದೆ.

Thursday, February 10, 2011

“ಕವಲು” ಓದಿದ ಮೇಲೆ ನನಗನ್ನಿಸಿದ್ದು

ನನ್ನ ಪೀಳಿಗೆಯ ಅನೇಕರ ಬಾಲ್ಯ ಕಾಲದ ಓದಿನ ಅವಿಭಾಜ್ಯ ಅನುಭವಗಳು ಎನ್.ನರಸಿಂಹಯ್ಯ, ತ್ರಿವೇಣಿ, ಎಂ.ಕೆ.ಇಂದಿರಾ, ಕಾರಂತರು ಹಾಗೇ ಭೈರಪ್ಪನವರ ಪುಸ್ತಕಗಳು. ನಾನೂ ಇದಕ್ಕೆ ಹೊರತಲ್ಲ. ಭೈರಪ್ಪನವರ ಸಾಧಾರಣ ಎಲ್ಲಾ ಕಾದಂಬರಿಗಳನ್ನೂ, ಈಚೆಗಿನ ಕೆಲವನ್ನು ಬಿಟ್ಟರೆ , ಓದಿ ಮುಗಿಸಿಯಾಗಿದೆ. ಓದಿದ್ದು ಬಹಳ ಹಿಂದೆ ಆದದ್ದರಿಂದ ಕೆಲವನ್ನು ಮರೆತೂ ಆಗಿದೆ. ಆದರೂ ಭೈರಪ್ಪನವರ ಕಾದಂಬರಿಗಳು ಎಂದರೆ ಒಂದು ಸಿದ್ಧ ವಿಶಿಷ್ಟತೆಯನ್ನು ನಿರೀಕ್ಷಿಸಬಹುದು ಎಂಬುದಂತೂ ಸತ್ಯ.

ಭೈರಪ್ಪನವರ ಬಹುತೇಕ ಕಾದಂಬರಿಗಳಲ್ಲಿ ಕಾಣಬರುವ ಸಮಾನ ಅಂಶ ಅಂದರೆ ಭಾರತೀಯ ಸನಾತನ ಪರಂಪರೆ, ಸಂಸ್ಕೃತಿ, ಆಚಾರ ವಿಚಾರಗಳಲ್ಲಿ ಅವರ ಶ್ರದ್ಧೆ. ಈ ಶ್ರದ್ಧಾ ಮೂಲದ ತಾಕಲಾಟ ಅವರ ಅನೇಕ ಕಾದಂಬರಿಗಳಲ್ಲಿ ಮುಖ್ಯ ವಸ್ತುವಾಗಿ ಬರುತ್ತದೆ. ’ಧರ್ಮಶ್ರೀ’ಯಲ್ಲಿ ಮತಾಂತರದೊಂದಿಗೆ, ’ವಂಶವೃಕ್ಷ ’ದಲ್ಲಿ ವಿಧವಾ ವಿವಾಹ, ವಿವಾಹಬಾಹ್ಯ ಸಂಬಂಧಗಳೊಂದಿಗೆ, ’ತಬ್ಬಲಿಯು ನೀನಾದೆ ಮಗನೆ’ ಯಲ್ಲಿ ಪಶ್ಚಿಮ ಪ್ರೇರಿತ ಆಧುನಿಕತೆಯೊಂದಿಗೆ ಹೀಗೆ ಈ ತಾಕಲಾಟದ ವಿವಿಧ ಮಗ್ಗುಲುಗಳನ್ನು ಇವರ ಕಾದಂಬರಿಗಳು ವಿಶ್ಲೇಷಿಸುತ್ತವೆ. ’ಗೃಹಭಂಗ’ದ ಸಂಪೂರ್ಣ ಕಥಾವಸ್ತುವಿಗೆ ಇದೇ ಧಾರ್ಮಿಕ ತಳಹದಿಯಿದೆ. ಅದರಲ್ಲಿನ ಪಾತ್ರಗಳು ಯೋಚಿಸುವುದು, ಸರಿ-ತಪ್ಪುಗಳ ನಿರ್ಣಯ, ಸಂಕಟ ಸಮಯದಲ್ಲಿನ ನಿರ್ಧಾರಗಳು ಎಲ್ಲಾ ಈ ತಳಹದಿಯ ಮೇಲೆಯೇ ನಡೆಯುತ್ತದೆ. ’ಮತದಾನ’ ದಲ್ಲಿ ಕಥಾವಸ್ತು ಲೌಕಿಕವಾಗಿದ್ದರೂ ಗ್ರಹಣ, ಅದರಿಂದ ಬಸಿರಿನ ಮೇಲಿನ ಪರಿಣಾಮ ಇತ್ಯಾದಿಗಳ ಮೂಲಕ ಸನಾತನ ಪರಂಪರೆ ಹಾದು ಹೋಗುತ್ತದೆ.’ನಿರಾಕರಣ’ದಲ್ಲಿ ಕೂಡಾ ಬದುಕಿನಲ್ಲಿ, ಸಂಬಂಧಗಳಲ್ಲಿ ಅರ್ಥವನ್ನು ಶೋಧಿಸುವ ಪ್ರಯತ್ನ ಸನಾತನ ಧರ್ಮದ ಚೌಕಟ್ಟಿನಲ್ಲಿಯೇ ನಡೆಯುತ್ತದೆ. ಇದೇ ಸರಪಳಿಯ ಮುಂದುವರಿದ ಭಾಗಗಳು ’ಆವರಣ’ ಮತ್ತು ಇತ್ತೀಚೆಗಿನ ’ಕವಲು’. ’ಆವರಣ’ ಮೊಘಲರ ಕಾಲದಲ್ಲಿ ಸನಾತನ ಧರ್ಮ ಪಾಲನೆಯ ಕಷ್ಟದ ಪರಿಸ್ಥಿತಿಯನ್ನು ಬಿಂಬಿಸಿದರೆ, ’ಕವಲು’ ನಮ್ಮ ಪಾರಂಪರಿಕ ಸಮಾಜ, ಕುಟುಂಬ ವ್ಯವಸ್ಥೆಯ ಮೇಲೆ, ಆಧುನಿಕ ಜಗತ್ತಿನ ಮಹತ್ವದ ಬದಲಾವಣೆಗಳಲ್ಲಿ ಒಂದಾದ ಸ್ತ್ರೀವಾದಿ ಅಂದೋಲನದ ಪರಿಣಾಮವನ್ನು ವಿಶ್ಲೇಷಿಸುತ್ತದೆ.

ಯಾವುದೇ ದಬ್ಬಾಳಿಕೆ, ಶೋಷಣೆ ನಿರಂತರವಾಗಿ ನಡೆಯಲು ಸಾಧ್ಯವಿಲ್ಲ. ಒಂದಲ್ಲ ಒಂದು ದಿನ ಅದರ ವಿರುದ್ಧದ ದನಿ ಎದ್ದೇ ಏಳುತ್ತದೆ. ರಾಜಕೀಯ ಸ್ತರದಲ್ಲಿ ದೇಶಗಳು ತಮ್ಮನ್ನು ತಲೆತಲಾಂತರದಿಂದ ಆಳುತ್ತಿದ್ದ ವಿದೇಶೀಯರನ್ನು ಎತ್ತೊಗೆದಿದ್ದಾರೆ. ಬಿಳಿಯ-ಕರಿಯ ವರ್ಣಬೇಧ ನೀತಿ ಇಂದು ಇತಿಹಾಸ. ಹಾಗೆಯೇ ನಮ್ಮಲ್ಲೂ ದಲಿತರ ಜಾಗೃತಿ ಹಾಗೂ ಹೋರಾಟಗಳು ಇದಕ್ಕೆ ಉದಾಹರಣೆಗಳು.

ಇದೇ ನಿಟ್ಟಿನಲ್ಲಿ ಇನ್ನೊಂದು ಮಹತ್ವದ ಹೋರಾಟ ಅಂದರೆ ಸ್ತ್ರೀ ವಾದಿ ಅಂದೋಲನ. ಗಂಡಿನಷ್ಟೇ ಸಮರ್ಥವಾಗಿದ್ದರೂ, ಹೆಣ್ಣು ಎಂಬ ಏಕಮಾತ್ರ ಕಾರಣಕ್ಕೆ ಸಮಾಜದಲ್ಲಿ ನ್ಯಾಯವಾದ ಸ್ಥಾನ ಕೊಡದೇ , ಕ್ರಮೇಣ ಆಕೆಯನ್ನು ಅಡಿಗೆ ಮನೆಗೆ ಸೀಮಿತಗೊಳಿಸಿದ ಸಮಾಜವ್ಯವಸ್ಥೆಯ ವಿರುದ್ಧದ ಸ್ತ್ರೀ ವಾದೀ ಹೋರಾಟ ಈಗಾಗಲೇ ಅನೇಕ ದಶಕಗಳಷ್ಟು ಹಳೆಯದು. ಇದರ ಅನೇಕ ಒಳ್ಳೆಯ ಪರಿಣಾಮಗಳನ್ನು ನಾವು ನಮ್ಮ ಮನೆಗಳಲ್ಲಿ, ಕಛೇರಿಗಳಲ್ಲಿ, ರಸ್ತೆಗಳಲ್ಲಿ ಕಾಣುತ್ತಿದ್ದೇವೆ. ಸ್ತ್ರೀಪರ ಕಾನೂನುಗಳು, ಪಾಲಿಸಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಸ್ತ್ರೀ ವಾದ ಸಾಕಷ್ಟು ಸಾಧಿಸಿದೆ.

ಆದರೆ ಯಾವುದೇ ಜಟಿಲ ಸಮಸ್ಯೆಗೆ ಅನೇಕ ಮಗ್ಗುಲುಗಳಿರುತ್ತವೆ. ಸ್ತ್ರೀ ವಾದವೂ ಇದಕ್ಕೆ ಹೊರತಲ್ಲ. ಸ್ತ್ರೀವಾದ ಹುಟ್ಟುವುದಕ್ಕೆ ಮೂಲ ಕಾರಣವಾದ ಹೆಣ್ಣು ಮಕ್ಕಳ ಶೋಷಣೆ, ಸಾಮಾಜಿಕ ಅಸಮಾನತೆಯ ಬಗ್ಯೆ ಎರಡು ಮಾತಿಲ್ಲದಿದ್ದರೂ, ಅದರ ಪರಿಹಾರಕ್ಕಾಗಿ ಸ್ತ್ರೀವಾದಿಗಳು ಹುಟ್ಟುಹಾಕಿರುವ ವಿಧಾನಗಳು , ಕಾನೂನುಗಳು ಇವುಗಳ ಬಗ್ಯೆ ಈಚೆಗೆ ಕ್ಷೀಣವಾಗಿಯಾದರೂ ಅಲ್ಲಲ್ಲಿ ಧ್ವನಿಗಳು ಕೇಳುತ್ತಿವೆ. ಕೇವಲ ಹೆಣ್ಣಿನ ದೂರಿನ ಆಧಾರದ ಮೇಲೆ ಮನೆಯವರನ್ನು ಜಾಮೀನಿಲ್ಲದೆ ಸೆರೆವಾಸಕ್ಕೆ ತಳ್ಳುವ ಕಲಮು 498A (Domestic Violence Act) ಇದರ ಒಂದು ಉದಾಹರಣೆ. ಇದು, ಹಾಗೂ ಇನ್ನಿತರ ಸ್ತ್ರೀಪರ ಕಾನೂನುಗಳು , ನೀತಿಗಳ ದುರುಪಯೋಗದ ಸಾಧ್ಯತೆಗಳ ಬಗ್ಯೆ ಚರ್ಚೆ ಅಲ್ಲಲ್ಲಿ ಶುರುವಾಗಿರುವುದರ ಹಿನ್ನೆಲೆಯಲ್ಲಿಯೇ ಭೈರಪ್ಪನವರ ಈ ಕಾದಂಬರಿ ಬಂದಿದೆ.

ಸ್ತ್ರೀ ವಾದದ ಅನಪೇಕ್ಷಿತ ಮಗ್ಗುಲು, ಅಂದರೆ, ಇದರಿಂದ ಸನಾತನ ಕುಟುಂಬ ವ್ಯವಸ್ಥೆಯ ಮೇಲಿನ ದುಷ್ಪರಿಣಾಮವನ್ನು ತೆರೆದಿಡುವುದು ಈ ಕಾದಂಬರಿಯ ಉದ್ದೇಶ. ಅದಕ್ಕನುಗುಣವಾಗಿ ವಿಧವಿಧ ಸನ್ನಿವೇಶಗಳನ್ನು, ಉಪಕಥೆಗಳನ್ನು ಪೋಣಿಸಿ ಕಾದಂಬರಿಯ ರೂಪದಲ್ಲಿ ಸಿದ್ಧಗೊಳಿಸಲಾಗಿದೆ. ಇಲ್ಲಿಯ ಮುಖ್ಯ ಹೆಣ್ಣು ಪಾತ್ರಗಳು ಕಪ್ಪು ಬಿಳುಪಿನವು. ಮಂಗಳೆ, ಇಳಾ , ಸರಾಫ್ ಮೇಡಂ, ಚಿತ್ರಾ ಹೊಸೂರ‍್, ಮಾಲಾ ಕೆರೂರ‍್ ಇತ್ಯಾದಿಗಳು (“ಬರೀ ಹಣೆ, ಬರೀ ಕಿವಿ, ಬಳೆ ಇಲ್ಲ, ಸಲ್ವಾರ‍್ಕಮೀಜ್, ಬಾಬ್ ಕಟ್ ತಲೆ, ವಿಧವೆಯೋ ಸೂತಕವೋ ಎಂಬಂಥ ಕಳೆ”) ಸ್ತ್ರೀ ವಾದಿ ಗುಂಪು ಇವರು “ಕಪ್ಪು” ಗುಂಪಿನವರು. ಇವರು ಓದಿದವರು; ತನ್ನ ಹಕ್ಕಿನ ಬಗ್ಯೆ ಚೆನ್ನಾಗಿ ಎಚ್ಚರವುಳ್ಳವರು; ಡೈವೋರ್ಸ್ ಬಗ್ಯೆ ಲಾಯರನ್ನು ಎಡತಾಕುವುದು ಇವರಿಗೆ ದೊಡ್ಡ ವಿಷಯವಲ್ಲ. ಗಂಡಸನ್ನು ಮೇಲ್ ಛಾವಿನಿಸ್ಟ್ ಪಿಗ್, ಲೋಫರ‍್, ಸ್ವಾರ್ಥಿ, ಚೀಟ್ ಎಂದು ತಿಳಿದುಕೊಂಡಿರುವವರು; ಗಂಡನನ್ನು ಬ್ಯಾ*ರ್ಡ್, ರ‍್ಯಾಸ್ಕಲ್ ಎಂದು ಬೈದುಕೊಳ್ಳುವವರು; ಕುಟುಂಬ ಎಂದರೆ ಗಂಡ, ಹೆಂಡತಿ, ಅವರ ಮಕ್ಕಳು ಮಾತ್ರಾ ಎಂದು ಪ್ರತಿಪಾದಿಸುವವರು. ಇನ್ನೊಂದೆಡೆ ವೈಜಯಂತಿ, ರಾಜಮ್ಮ, ಪಾರ್ವತಿ, ದ್ಯಾವಕ್ಕ ಇತ್ಯಾದಿಗಳು (“ದೊಡ್ಡ ಕುಂಕುಮ, ತುರುಬು, ಅದಕ್ಕೊಂದು ಹೂವಿನ ದಂಡೆ, ಕಿವಿಯ ಓಲೆ, ಮಾಂಗಲ್ಯ, ಸೀರೆ”) ಇವರುಗಳು “ಬಿಳಿಯ” ಗುಂಪು. ಇವರು ಸನಾತನ ಕುಟುಂಬ ವ್ಯವಸ್ಥೆಯ ಪ್ರತಿನಿಧಿಗಳು. ಇವರು ಹೊರಗಿನ ಕೆಲಸದ ಸಮಸಮವಾಗಿ ಮನೆಗೆಲಸ ಮಾಡುವರು, ಮಕ್ಕಳನ್ನು ಸಾಂಪ್ರದಾಯಿಕವಾಗಿ ಬೆಳೆಸುವವರು, ಕುಡುಕ ಗಂಡನೊಡನೆಯೂ ಹೊಂದಿಕೊಂಡು ಸಂಸಾರ ಮಾಡುವವರು. ಇವೆರಡು ಗುಂಪುಗಳ ಪ್ರತಿನಿಧಿಗಳು ಮುಖಾಮುಖಿಯಾಗುವ ಸನ್ನಿವೇಶಗಳು ಹೆಚ್ಚಿಲ್ಲದಿದ್ದರೂ, ಕಥಾನಕದಲ್ಲಿ ’ಬಿಳಿ’ ಗುಂಪಿನ ವ್ಯಕ್ತಿಗಳ ಸಂಗತಿಗಳು ಆಗಾಗ ಬಂದು ಮೊದಲ ಗುಂಪಿನವರ ಜೀವನ ಶೈಲಿಯ ವಿಮರ್ಶೆಗೆ ಒಂದು Frame Of Reference ತಂದುಕೊಡುತ್ತವೆ.

ಇಲ್ಲಿಯ ಮುಖ್ಯ ಗಂಡು ಪಾತ್ರಗಳು, ಜಯಕುಮಾರ ಮತ್ತು ವಿನಯ, ಸ್ತ್ರೀವಾದಿ ಹೆಂಡಂದಿರಿಂದ ಸತಾಯಿಸಲ್ಪಟ್ಟ ಬಲಿಪಶುಗಳು. ನಚಿಕೇತ ಅಮೆರಿಕಾದಲ್ಲಿ ಹೆಣ್ಣಿನಿಂದ ಮೋಸ ಹೋದವನು. ಇವರಿಗೆ ಡೈವೋರ್ಸ್ ಸಹಾ ಸುಲಭವಾಗಿ ಸಿಗುವುದಿಲ್ಲ. ಇವರು ಮಕ್ಕಳನ್ನು ತಾಯಂದಿರಿಗಿಂತ ಹೆಚ್ಚು ಮುಚ್ಚಟೆಯಿಂದ ಬೆಳೆಸುವವರು. ಸಮಾಜ ಸಾಧಾರಣವಾಗಿ ಮಾನ್ಯ ಮಾಡದ ವಿವಾಹ ಬಾಹ್ಯ ಸಂಬಂಧ, ಬೆಲೆವೆಣ್ಣುಗಳ ಸಂಪರ್ಕ ಇತ್ಯಾದಿಗಳನ್ನು ಜಯಕುಮಾರ ಮಾಡಿದರೂ, ಲೇಖಕರು ಅವನ್ನು ಸಹಾನುಭೂತಿಯಿಂದಲೇ ನೋಡುತ್ತಾರೆ.

ಸ್ತ್ರೀ ವಾದದ ಒಂದು ಮುಖ್ಯ ಅಂಶ ಲೈಂಗಿಕ ಸ್ವಾತಂರ್ತ್ಯ. ಅದರ ನಿದರ್ಶನಗಳು ಈ ಪುಸ್ತಕದಲ್ಲಿ ವಿಪುಲವಾಗಿವೆ. ವಿವಾಹಪೂರ್ವ, ವಿವಾಹೇತರ ಸಂಬಂಧಗಳು ಹೋಗಲಿ, ವಿಮೋಚನೆಯ ಅತ್ಯುಚ್ಚ ಮೆಟ್ಟಿಲು ಎಂದು ಸರಾಫ್ ಮೇಡಂ ಹೇಳುವ ಸಲಿಂಗ ಸಂಬಂಧ ಕೂಡಾ ಇದರಲ್ಲಿ ಕಾಣಬರುತ್ತವೆ. ಇದರ ಒಂದು ಗಂಡು ಪಾತ್ರ ಪ್ರಭಾಕರ ಕಾಲೇಜಿನಲ್ಲಿ ಸಹಪಾಠಿಯೊಂದಿಗೆ ಸಂಬಂಧ ಶುರುಮಾಡುವುದು ಕೂಡಾ ಸ್ತ್ರೀ ವಾದೀ ಮೇಡಮ್ಮನ ಪ್ರಭಾವೀ ಲೆಕ್ಚರು ಕೇಳಿಯೇ!

’ಆವರಣ’ ದಂತೆ ’ಕವಲು’ಕೂಡಾ ಒಂದು Agenda based Novel. ಅಂದರೆ ಲೇಖಕರು ಪ್ರತಿಪಾದಿಸಬೇಕೆಂದಿರುವ ವಿಷಯ ಸೂಚ್ಯವಾಗಿಲ್ಲದೆ, ಢಾಳಾಗಿ ಕಣ್ಣಿಗೆ ಹೊಡೆಯುತ್ತದೆ. ಇದರಲ್ಲಿ ವಿಷಯ ಪ್ರತಿಪಾದನೆಯೇ ಮುಖ್ಯ ಹೊರತು, ಅದಕ್ಕಾಗಿ ಆಯ್ದುಕೊಂಡಿರುವ ಕಾದಂಬರಿ ಮಾಧ್ಯಮದ, ಕಾದಂಬರಿಯಾಗಿ, ಯಶಸ್ಸು ಅಷ್ಟು ಮುಖ್ಯವಲ್ಲ. ಎಲ್ಲಾ ಕಾದಂಬರಿಗಳ , ಎಲ್ಲಾ ಪಾತ್ರಗಳೂ ಕಾದಂಬರಿಕಾರನ ಸೃಷ್ಟಿಯೇ ಆಗಿದ್ದರೂ, ಶ್ರೇಷ್ಠ ಕೃತಿಗಳಲ್ಲಿ ಕೆಲವು ಪಾತ್ರಗಳು ಲೇಖಕನನ್ನೂ ಮೀರಿ ಬೆಳೆಯುತ್ತವೆ. ಓದಿ ಮುಗಿದ ಮೇಲೂ ನಮ್ಮನ್ನು ಕಾಡುತ್ತವೆ. ಭೈರಪ್ಪನವರದ್ದೇ ಆದ ’ಗೃಹಭಂಗ’ದ ನಂಜಮ್ಮ, ಗಂಗಮ್ಮ, ಚೆನ್ನಿಗರಾಯ , ’ವಂಶವೃಕ್ಷ”ದ ಶ್ರೋತ್ರಿ ಇವು ಕೆಲವು ಉದಾಹರಣೆಗಳು. ಆದರೆ ಈ ಕಾದಂಬರಿಯಲ್ಲಿ , ’ಆವರಣ’ದಂತೆ, ಪಾತ್ರಗಳು ಲೇಖಕನ ಅಪ್ಪಣೆಯನ್ನು ಪಾಲಿಸುವುದು ಸ್ಪಷ್ಟವಾಗಿ ಕಾಣುತ್ತದೆ. ಗೊಂಬೆಯಾಟದ ಸೂತ್ರ ಆಡುವುದು ನೋಡುಗರ ಅರಿವಿಗೆ ಬರುತ್ತದೆ. ಅದಕ್ಕೇ ಪುಸ್ತಕ ಓದಿ ಮುಗಿದ ಮೇಲೆ , ಪುಸ್ತಕದ ಉದ್ದೇಶ ನೆನಪಿನಲ್ಲುಳಿದು, ಪಾತ್ರಗಳು ಮರೆಯಾಗುತ್ತವೆ. ಬಹುಷಃ ಇದಕ್ಕೇ ಇರಬೇಕು ಯು.ಆರ‍್ ಅನಂತಮೂರ್ತಿಗಳು ’ಆವರಣ’ವನ್ನು ಕಾದಂಬರಿಯೇ ಅಲ್ಲ ಎಂದದ್ದು. ಕವಲು ಮತ್ತು ಆವರಣ ಗಳನ್ನು ಕಾದಂಬರಿಗಳನ್ನಾಗಿಸದೇ, ಸಂಶೋಧನಾ ಪ್ರಬಂಧಗಳಾಗಿಸಿದ್ದರೆ ಬಹುಷಃ ಇದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತಿದ್ದವೇ? ಹೇಳುವುದು ಕಷ್ಟ.

ಹಾಗಾದರೆ ಕಾದಂಬರಿಯಾಗಿ ’ಕವಲು’ ಎಷ್ಟರಮಟ್ಟಿಗೆ ಯಶಸ್ವಿ ಎನ್ನಬಹುದು? ಭೈರಪ್ಪನವರು ತಮ್ಮ ಎಂದಿನ ಕೌಶಲ್ಯದಿಂದ ಒಳ್ಳೆಯ ಕಥೆ ಹೆಣೆದಿದ್ದರೂ, ಈ ’ಕಪ್ಪು-ಬಿಳಿ’ ಕಥಾವಸ್ತುವಿನ ಸಂಭಾವ್ಯತೆ ಪ್ರಶ್ನಾರ್ಹವೇ ಅನಿಸುತ್ತದೆ. ಈ ಸ್ತ್ರೀವಾದೀ ಪಾತ್ರಗಳು, ಸ್ತ್ರೀ ವಾದದ ಕರಾಳ ಸಾಧ್ಯತೆಗಳನ್ನು ಬಿಚ್ಚಿಟ್ಟರೂ, ಹೆಚ್ಚೆಂದರೆ ಇವು ಸಮಾಜದ Fringe elementsಗೆ ಮಾತ್ರವೇ ಸೀಮಿತವಾಗಿ ತೋರುತ್ತವೆ. ಸದ್ಯಕ್ಕಂತೂ ನಮ್ಮ ಸುತ್ತಲಿನ ಸಮಾಜದಲ್ಲಿ ಈ ಅಚ್ಚಗಪ್ಪುಬಣ್ಣಕ್ಕಿಂತ ಬೇರೆ ಬೇರೆ ಸ್ತರದ ಬೂದುಬಣ್ಣವೇ ಹೆಚ್ಚು ಕಾಣುತ್ತದೆ. ನಾಳೆ ಈ ಬೂದು ಬಣ್ಣ ಕರಿಯಾಗಿ ಬದಲಾಗುತ್ತದೆಯೇ? ಕಾಲವೇ ಹೇಳಬೇಕು. ಇದಕ್ಕೆ ಪರಿಹಾರವನ್ನೂ ಪಾತ್ರವೊಂದು ಸೂಚಿಸುತ್ತದೆ “ಓದಿದ ಗಂಡಸರೆಲ್ಲ ಎಂಗಸರಾಗ್ತಾರೆ.ಓದಿದ ಎಂಗಸರೆಲ್ಲ ಗಂಡಸರಾಗ್ತಾರೆ. ಗಂಡಸರು ಗಂಡಸರಾಗಿ, ಎಂಗಸರು ಎಂಗಸರಾಗಿ ಇರಬೇಕಾದರೆ ಯಾರೂ ಓದಕೂಡದು”.!

Monday, January 24, 2011

ಫೌಂಟನ್ ಪೆನ್ನಿನಲ್ಲಿ ಬರೆಯುವ ಸೊಗಸು

ಅಂತೂ ಐದನೆಯ ತರಗತಿಗೆ ಪ್ರವೇಶಿಸಿದಾಗ ಪೆನ್ನಿನಲ್ಲಿ ಬರೆಯುವ ಅರ್ಹತೆ ಬಂದಿತು. ಆಗ ನಮ್ಮೂರಲ್ಲಿ ಮೋಹನ್ ಪೆನ್ನು ಅಂತ ಸಿಗುತ್ತಿತ್ತು. ನನ್ನ ತರಹ ಹೊಸದಾಗಿ ಪೆನ್ನು ಹಿಡಿದು ಬರೆಯುವವರ ಫೇವರಿಟ್ಟು. ಬೆಲೆ ೭೫ ಪೈಸೆ !!

ನನಗೂ ಒಂದು ಮೋಹನ್ ಪೆನ್ನು ಬಂತು. ಸಂಭ್ರಮವೋ ಸಂಭ್ರಮ. ಅಂಡೆಯಲ್ಲಿ ಶಾಯಿ ತುಂಬಿಸುವುದೇನು, ಆ ಪ್ರಯತ್ನದಲ್ಲಿ ಅರ್ಧಕ್ಕರ್ಧ ಕೆಳಗೆ ಚೆಲ್ಲುವುದೇನು, ಅದನ್ನೆಲ್ಲಾ ಬೇಗ ಬೇಗ ಬಳಿಯುವುದೇನು. ಅಷ್ಟೆಲ್ಲಾ ಕಷ್ಟಪಟ್ಟು ಶಾಯಿ ತುಂಬಿಸಿ, ಬರೆಯತೊಡಗಿದರೆ , ನಿಬ್ಬಿನಿಂದ ಶಾಯಿಯೇ ಹರಿಯಬಾರದೇ ! ಶಕ್ತಿಯೆಲ್ಲಾ ಬಿಟ್ಟು ಪೆನ್ನು ಕೊಡವಿದರೆ ಎದುರಿನ ಗೋಡೆಯ ಮೇಲೆಲ್ಲಾ ನೀಲಿ ಚಿತ್ತಾರ. ಪೆನ್ನಿನಿಂದ ನೀಲಿ ಬಣ್ಣದ ಕಾರಿಕೆ. ಕಾಗದದ ಮೇಲೆ ಇಂಕಿನ ಗೊಣ್ಣೆಗಳು. ಅದನ್ನು ಹೀರಿದ ಕಾಗದದ ಮೇಲೆ ನೀಲಿ ಬಣ್ಣ ನಿಧಾನವಾಗಿ ಅಗಲಗಲವಾಗುತ್ತಿದ್ದಂತೆ ಪ್ಯಾನಿಕ್ !

ಇನ್ನು ಇಂಕು ಒಸರುವುದು. ಅಂಡೆಯ ಬುಡ ಅದು ಹೇಗೆ ಒಡೆಯುತ್ತಿತ್ತೋ ಪರಮಾತ್ಮನೇ ಬಲ್ಲ. Hairline Fracture . ಕಣ್ಣಿಗೆ ಕಾಣುತ್ತಲೂ ಇರಲಿಲ್ಲ. ಜಂಭದಿಂದ ಜೇಬಿನಲ್ಲಿ ಪೆನ್ನು ಇಳಿಬಿಟ್ಟುಕೊಂಡು ಸ್ಕೂಲಿಗೆ ಹೋದರೆ, ಅಮಾವಾಸ್ಯೆಯಿಂದ ಹುಣ್ಣಿಮೆಯವರೆಗೆ ಚಂದ್ರ ಹಂತಹಂತವಾಗಿ ದೊಡ್ಡದಾದಂತೆ ಜೇಬಿನ ಮೇಲೆ ಕ್ರಮೇಣ ದೊಡ್ಡದಾಗುವ ನೀಲಿ ಚಂದ್ರ.

ಅಂಡೆಯಮೇಲೆ ನಿಬ್ಬಿನ ಭಾಗ ಜೋಡಿಸಲಿಕ್ಕೆ ಇರುವ ಥ್ರೆಡ್ಡುಗಳ ಮಧ್ಯದಿಂದ ಇಂಕಿನ ಹನಿಗಳು ನಿಧಾನವಾಗಿ ಜಿನುಗಿದರೆ , ಕೈ ತುಂಬಾ ಇಂಕು . ನೋಟು ಬುಕ್ಕಿನ ಮೇಲೆಲ್ಲಾ ಬೆರಳಿನ ಗುರುತುಗಳು. ಅದಕ್ಕೆ ವ್ಯಾಸಲೀನ್ ಹಚ್ಚಿದರೆ ಜಿನುಗುವುದು ನಿಲ್ಲುತ್ತದೆ ಅಂತ ಯಾರೋ ಐನ್ಸ್ಸ್ಟೈನ್ ಪತ್ತೆ ಮಾಡಿದ್ದರು. ಸರಿ ಥ್ರೆಡ್ ಇರುವ ಭಾಗಕ್ಕೆ ಚೆನ್ನಾಗಿ ವ್ಯಾಸಲೀನ್ ಬಳಿಯುವುದು. ಇದರ ಪರಿಣಾಮ ಕೈಯೆಲ್ಲಾ ವ್ಯಾಸಲೀನ್ ಜಿಡ್ಡು, ಪುಸ್ತಕದ ಮೇಲೆಲ್ಲಾ ಕಲೆ. ಯಕ್!

ಇಷ್ಟರ ನಡುವೆ ಕೈಜಾರಿ ಪೆನ್ನು ಕೆಳಗೆ ಬೀಳುವುದೇನು , ಅದರ ನಿಬ್ಬು ಒಂದರ್ಧ ಉತ್ತರ ದಿಕ್ಕು ಇನ್ನೊಂದರ್ಧ ದಕ್ಷಿಣ ದಿಕ್ಕು ಮಾಡಿ ಸೊಟ್ಟ ಮೂತಿ ಮಾಡುವುದೇನು.ಅಳು ಬರುವುದೊಂದು ಬಾಕಿ. ಸರಿ ಮತ್ತೆ ಅವನ್ನ ಒಂದೇ ನೇರಕ್ಕೆ ತರಲಿಕ್ಕೆ ಒತ್ತುವುದು , ಕುಟ್ಟುವುದು ಎಲ್ಲಾ ಮಾಡುವಾಗ , ಲಟಕ್ ಎಂಬ ಶಬ್ದ , ನಿಬ್ಬು ಮುರಿದಿದೆ. ಹೊಸಾ ನಿಬ್ಬಿಗೆ ನಾಕಾಣೆ ಎಲ್ಲಿಂದ ಹೊಂದಿಸುವುದು!

ಇದಾವುದೂ ಅನಾಹುತವಿಲ್ಲದೆ ಸುಸೂತ್ರವಾಗಿ ಶಾಲೆಯಲ್ಲಿ ಬರೆಯುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ಶಾಯಿ ಫಿನಿಶ್ !. ಬೆಂಚಿನಲ್ಲಿ ಪಕ್ಕದ ನಾಗರಾಜನೋ, ಸುರೇಶನೋ, ಉಮೇಶನೋ ಇವರ್ಯಾರ ಹತ್ತಿರವಾದರೂ ಗೋಗರೆದು , ಎರಡು "ಹುಂಡು" ಇಂಕು ಕಡ ತೆಗೆದುಕೊಳ್ಳುವುದು. ವಾಪಸು ಕೊಡಬೇಕಾದದ್ದು ಕಡ್ಡಾಯ !.

ಆಗಾಗ ಕ್ಯಾಪು ಕಳೆಯುತ್ತಿದ್ದುದುಂಟು. ಕ್ಯಾಪು ಕಳೆಯಿತು ಅಂತ ಹೊಸಾ ಪೆನ್ನು ತಗೊಳ್ಳುವುದೇ? ಛೇ, ಛೇ . ಸುಮ್ಮನೆ ದುಡ್ಡು ದಂಡ. ಮತ್ಯಾವುದೋ ಮೂಲೆಗೆ ಬಿದ್ದ ಪೆನ್ನಿನ ಕ್ಯಾಪು ತೆಗೆದು ಹಾಕಿಕೊಂಡರಾಯಿತು. ಕೆಂಪು ಅಂಡೆ, ಹಸಿರು ಕ್ಯಾಪು !

ಮನೆಯಲ್ಲಿ ಬಾಟಲಿಯಲ್ಲಿದ್ದ ಶಾಯಿ ಖರ್ಚಾದರೆ, ಹೊಸ ಬಾಟಲಿ ತರುವುದಲ್ಲ. ಅದೇ ಬಾಟಲಿ refill ಮಾಡುವುದು. ಅಂಗಡಿಯವನ ಹತ್ತಿರ ಇದ್ದ ಸಾರಾಯಿ ಬಾಟಲಿ ಥರಾ ದೊಡ್ಡ ಇಂಕಿನ ಬಾಟಲಿಯಿಂದ ಮಾರ್ಕು ಮಾಡಿದ ಪ್ಲಾಸ್ಟಿಕ್ಕಿನ ಲೋಟಕ್ಕೆ ಬಗ್ಗಿಸಿ ನಮ್ಮ ಬಾಟಲಿ ತುಂಬಿಸಿಕೊಡುತ್ತಿದ್ದ. ದರ ಮೂವತ್ತೈದು ಪೈಸೆ. ಪೆನ್ನಿಗೆ ಮಾತ್ರಾ ಶಾಯಿ ತುಂಬಬೇಕೇ? ಅದೂ ಉಂಟು. ಬರೀ ಮೂರು ಪೈಸೆ !

ಶಾಯಿ ಚೆಲ್ಲಿದರೆ, ಕೈಗೆ ಹತ್ತಿದರೆ ಅದನ್ನು ತಲೆಗೆ ಹಚ್ಚಿಕೊಳ್ಳಬೇಕು ಅಂತ ನಿಯಮ. ಯಾರು ಮಾಡಿದ್ದೋ ಗೊತ್ತಿಲ್ಲ, ಆದರೆ ನಾವೆಲ್ಲಾ ನಿಷ್ಠೆಯಿಂದ ಪಾಲಿಸುತ್ತಿದ್ದೆವು. ಪೂರ್ಣಚಂದ್ರ ತೇಜಸ್ವಿ ಅಣ್ಣ (ತಮ್ಮ?) ಚೈತ್ರ ಚಿಕ್ಕಂದಿನಲ್ಲಿ ಹೀಗೆ ಕೆಂಪಿಂಕು ಚೆಲ್ಲಿ , ಅದನ್ನೆಲ್ಲಾ ಯಾರಿಗೂ ಹೇಳದೆ ತಲೆಗೆ ಬಳಿದುಕೊಂಡು, ಮಾರನೇ ದಿನ ಅವರಮ್ಮ ತಲೆಗೆ ಸ್ನಾನ ಮಾಡಿಸುವಾಗ , ತಲೆಯೆಲ್ಲಾ ಕೆಂಪಾಗಿ , ತಲೆಯಿಂದ ರಕ್ತ ಬರುತ್ತಿದೆ ಅಂತ ಅವರಮ್ಮ ಗಾಬರಿಯಾಗಿ, ಒಟ್ಟಿನಲ್ಲಿ ರಂಪ. "ಅಣ್ಣನ ನೆನಪು" ಓದಿ ನೋಡಿ.

ಇಷ್ಟೆಲ್ಲಾ ರಗಳೆಯ ನಡುವೆಯೂ , ಚೆನ್ನಾಗಿ ಬರೆಯುವ ಪೆನ್ನು ಅಂದರೆ ಅದರ ಆನಂದವೇ ಬೇರೆ. ಕರಕರ ಎನ್ನದೇ, ಬೆಣ್ಣೆಯಂತೆ ನಿಬ್ಬು ಕಾಗದದ ಮೇಲೆ ಓಡುತ್ತಾ ಅಕ್ಷರಗಳನ್ನು ಮೂಡಿಸುತ್ತಿದ್ದರೆ, ಅದೇ ಒಂದು ಥ್ರಿಲ್ಲು.

ಚೀನಾದಿಂದ ಬಂದ ಹೀರೋ ಪೆನ್ನು ಇಟ್ಟುಕೊಳ್ಳುವುದು ಆಗ ಒಂದು ದೊಡ್ಡಸ್ತಿಕೆಯ ವಿಷಯ. ಹುಡುಗರಿಗೆ ಅವರಪ್ಪ ಅಮ್ಮ "ನೋಡು, ಚೆನ್ನಾಗಿ ಓದಿ ಕ್ಲಾಸಿಗೆ ಫಸ್ಟು ಬಂದರೆ ಒಂದು ಹೀರೋ ಪೆನ್ನು ಕೊಡಿಸುತ್ತೀನಿ" ಅಂತ ಆಸೆ ತೋರಿಸುವರು.

ಹೀಗೇ ದೊಡ್ಡವರಾದೆವು. ಹೈಸ್ಕೂಲಿಗೆ ಬರುವಾಗ ಬಾಲ್ ಪೆನ್ ಅಡಿಯಿಟ್ಟಿತ್ತು. ಕಾಲೇಜಿಗೆ ಬರೋ ಹೊತ್ತಿಗೆ ಫೌಂಟನ್ ಪೆನ್ ಉಪಯೋಗ ವಿರಳವಾಗುತ್ತಾ ಹೋಗಿತ್ತು.ಕೆಲಸಕ್ಕೆ ಸೇರಿದಮೇಲಂತೂ ಬರೀ ಬಾಲ್ ಪೆನ್ನುಗಳದ್ದೇ ರಾಜ್ಯ.

ಮನೆಯಲ್ಲಿ ಫೋನಿನ ಪಕ್ಕದ ಪಿಂಗಾಣಿ ಲೋಟದಲ್ಲಿ ಸುಮಾರು ಒಂದು ಡಜನ್ ಬಾಲ್ ಪೆನ್ನುಗಳು. ಯಾರಾದರೂ ಫೋನಿನಲ್ಲಿ ಯಾವುದೋ ವಿಷಯ ಹೇಳುತ್ತಿದ್ದಾಗ ಬರೆದಿಟ್ಟುಕೊಳ್ಳೋಣ ಎಂದು ಪೆನ್ನು ತೆಗೆದರೆ, ಒಂದಾದರೂ ಬರೆಯಬಾರದೇ! ಇಂಕು ಮುಗಿದಿದೆ ಅಥವಾ ಒಣಗಿದೆ. ಅಥವಾ ಎಲ್ಲೋ ಏನೋ ಮುರಿದಿದೆ. ಒಟ್ಟಿನಲ್ಲಿ ಉಪಯೋಗಕ್ಕೆ ಇಲ್ಲ.

ಚೀನಾದಿಂದ ಬಂದ rubberised ಬಾಲ್ ಪೆನ್ನುಗಳು. ಇಪ್ಪತ್ತು ಪೆನ್ನಿಗೆ ಹೋಲ್ ಸೇಲ್ ದರ ಮೂವತ್ತು ರೂಪಾಯಿ. ಚೆನ್ನಾಗಿ ಬರೆಯುತ್ತದೆ. ಇಂಕು ಮುಗಿದಮೇಲೆ ಎಸೆದರಾಯಿತು. Use and Throw. ಈ ಸ್ಕೀಮು ಜಾರಿಗೆ ಬಂದ ಮೇಲೆ ಮನೆಯಲ್ಲಿ ತುಂಬಿದ್ದ ಕೆಲಸಕ್ಕೆ ಬಾರದ ಪೆನ್ನುಗಳು ಕಸದ ಬುಟ್ಟಿ ಸೇರಿದವು.

ಮಗನಿಗೆ ಶಾಲೆಯಲ್ಲಿ ಜೆಲ್ ಪೆನ್ನು. ಫೌಂಟನ್ ಪೆನ್ನಿನ ಎಫೆಕ್ಟ್, ಬಾಲ್ ಪೆನ್ನಿನ ಅನುಕೂಲತೆ.

ಇದ್ದಕ್ಕಿದ್ದಂತೆ ಎರಡು ವರ್ಷದ ಕೆಳಗೆ ಫೌಂಟನ್ ಪೆನ್ನು ಉಪಯೋಗಿಸಬೇಕು ಅಂತ ಹುಕಿ ಹುಟ್ಟಿತು. ಮಾರ್ಕೆಟ್ಟಿನಲ್ಲಿ ಹುಡುಕಿದರೆ, ಫೌಂಟನ್ ಪೆನ್ ಮಾರುವವರೇ ಕಮ್ಮಿ . ಸಿಕ್ಕದರೂ ಅಗ್ಗದ , ಮೋಹನ್ ಪೆನ್ನಿನ ಆಧುನಿಕ ವರ್ಷನ್ನುಗಳು. ಕೊನೆಗೆ ಹೀರೋ ಪೆನ್ನಿದೆಯಾ ಅಂತ ಕೇಳಿದೆ. ಇತ್ತು . ಖುಷಿಯಿಂದ ಕೊಂಡುಕೊಂಡು ಬಂದು , ಆಫೀಸಿಗೆ ಕೊಂಡೊಯ್ದರೆ , ಬರೆಯಲೇ ಬಾರದೇ? . ಮತ್ತೆ ಹಳೆಯ ಕಾಲದಂತೆ ಕೊಡವುವುದು, ಬರೆಯುವುದು, ಕೊಡವುದುದು, ಬರೆಯುವುದು. ಸ್ವಲ್ಪ ಕಾಲದಲ್ಲೇ ಬೇಜಾರು. ಹೇಳಿ ಕೇಳಿ ಚೀನಾದ ಮಾಲಲ್ಲವೇ. ಇನ್ನೇನು ನಿರೀಕ್ಷಿಸುವುದು ?

ಆಮೇಲೆ ಇನ್ನೊಮ್ಮೆ ಅಂಗಡಿಯಲ್ಲಿ ಕೇಳಿದಾಗ , ಪಾರ್ಕರ್‍ ಕಂಪನಿಯ ಅಮಿತಾಭ್ ಬಚ್ಚನ್ ಜಾಹಿರಾತಿನ, ಫೌಂಟನ್ ಪೆನ್ನು ಸಿಕ್ಕಿತು. ಬೆಲೆ ನೂರು ರೂಪಾಯಿ. ಆವಾಗಿನಿಂದ, ಅಂದರೆ ಸುಮಾರು ಒಂದು ವರ್ಷದಿಂದ ಅದನ್ನೇ ಉಪಯೋಗಿಸುತ್ತಿದ್ದೇನೆ. ಏನೂ ತೊಂದರೆಯಿಲ್ಲ.

ಆಗಿನಿಂದ ಬಾಲ್ ಪೆನ್ನು ಉಪಯೋಗಿಸುವುದು ನಿಂತೇ ಹೋಗಿದೆ. ಈಗ ಈ ಪೆನ್ನು ಅಂದರೆ ಎಷ್ಟು ಇಷ್ಟ ಅಂದರೆ, ಏನಾದರೂ ಬರೆಯಲಿಕ್ಕೆ ಇದೆಯಾ ಅಂತ ಹುಡುಕುತ್ತಿರುತ್ತೇನೆ !

..ಕರಕರ ಎನ್ನದೇ, ಬೆಣ್ಣೆಯಂತೆ ನಿಬ್ಬು ಕಾಗದದ ಮೇಲೆ ಓಡುತ್ತಾ ಅಕ್ಷರಗಳನ್ನು ಮೂಡಿಸುತ್ತಿದ್ದರೆ, ಕಲಾವಿದನಿಗೆ ರೇಖೆಗಳು ಮೂಡಿ ಚಿತ್ರ ಸ್ಪಷ್ಟವಾಗುತ್ತಿದಂತೆ ಆಗುವ ಸಂತೋಷವೇ ನನಗೂ ಆಗುತ್ತದೆ. ಆಹಾ ಏನು ಸೊಗಸು !!!

PS: ಫೌಂಟನ್ ಪೆನ್ನಿನ ಉಪಯೋಗ ವಾತಾವರಣಕ್ಕೂ ಒಳ್ಳೆಯದು. ಹೇಗೆ ಅಂದಿರಾ. ನಾನೀಗ Use and Throw ಸಂಸ್ಕೃತಿಯ ಬಾಲ್ ಪೆನ್ನುಗಳ ಉಪಯೋಗ ಬಿಟ್ಟೇ ಬಿಟ್ಟಿದ್ದೇನೆ. Use ಇಲ್ಲ, Throw ಇಲ್ಲ.!!!!

ನೀವೇನಂತೀರಿ?

ಗಾಂಧಿ ಹತ್ಯೆ ನಡೆದ ದಿನ

ಶುಕ್ರವಾರ, ೩೦ನೆಯ ಜನವರಿ, ೧೯೪೮ರಂದು ದೆಹಲಿಯಲ್ಲಿ ಬೆಳಗಾಯಿತು. ರೈಲ್ವೇ ಸ್ಟೇಷನ್ನಿನ ಪ್ರವಾಸಿಗರ ತಂಗುಕೋಣೆ (Retiring Room)ನಲ್ಲಿದ್ದ ನಥೂರಾಮ್ ಗೋಡ್ಸೆ ಬೆಳಿಗ್ಯೆ ಎದ್ದು ತಯಾರಾಗುತ್ತಿದ್ದಂತೆ , ವಿಷ್ಣು ಕರ್ಕರೆ ಮತ್ತು ನಾರಾಯಣ ಆಪ್ಟೆ ಅವರ ರೂಮಿಗೆ ಬಂದರು. ಗೋಡ್ಸೆಗೆ ರಾತ್ರಿ ಚೆನ್ನಾಗಿ ನಿದ್ದೆ ಬಂದಿತ್ತು.

ಮೂವರೂ ಮೊದಲನೆಯ ಮಹಡಿಯಲ್ಲಿದ್ದ ರೆಸ್ಟೋರೆಂಟಿಗೆ ತಿಂಡಿಗೆ ಹೋದರು. ಆರ್ಡರು ಮಾಡುವುದರಲ್ಲಿದ್ದ ಅವರಿಗೆ, ವೈಟರ‍್ ದೊಡ್ಡ ಸಲಾಮು ಹಾಕಿ ಪರಿಚಯದ ನಗೆ ಬೀರಿ ಮರಾಠಿಯಲ್ಲಿ ಕೇಳಿದ “ ಸಾಹೇಬರೇ, ಊರಿಂದ ತುಂಬಾ ದೂರ ಬಂದಿದ್ದೀರಿ !”

ದೆಹಲಿಯಂಥಾ ಪರವೂರಿನಲ್ಲಿ, ಅದೂ ಈ ದಿನ, ತಮ್ಮನ್ನು ಯಾರೋ ಗುರುತಿಸಿದ್ದನ್ನು ನೋಡಿ ಗಾಬರಿಯಾದ ಅವರು ಆತನತ್ತ ನೋಡಿದರು. ಗೋಡ್ಸೆ ಹೇಳಿದರು “ನೀನೂ ಬಹಳ ದೂರ ಬಂದಿದ್ದಂತೆ ಕಾಣುತ್ತದೆ. ಕಳೆದ ಬಾರಿ ನೋಡಿದಾಗ ನೀನು ಪುಣೆಯ ರೈಲ್ವೇ ಸ್ಟೇಷನ್ನಿನ ರೆಸ್ಟೋರೆಂಟಿನಲ್ಲಿದ್ದೆ ಅಲ್ಲವೇ?”

“ಹೌದು. ನಿಮಗೆ ಅಲ್ಲಿ ಸುಮಾರು ಬಾರಿ ತಿಂಡಿ, ಕಾಫಿ ತಂದುಕೊಟ್ಟಿದ್ದೇನೆ. ಇಲ್ಲಿಗೆ ವರ್ಗ ಆಗಿ ಎರಡು ವಾರವಾಯಿತಷ್ಟೇ” ಎಂದ ಆತ.

ಆ ಕಾಲದಲ್ಲಿ ಬ್ರಾಂಡನ್ & ಕಂಪನಿ ಎಂಬ ಗುತ್ತಿಗೆದಾರ ಭಾರತದಾದ್ಯಂತ ರೈಲ್ವೇ ಸ್ಟೇಷನ್ನುಗಳ ಯೂರೋಪಿಯನ್ ಶೈಲಿಯ ರೆಸ್ಟೋರೆಂಟುಗಳನ್ನು ನಡೆಸುತ್ತಿದ್ದು , ನೌಕರರುಗಳ ವರ್ಗಾವಣೆ ಸಾಮಾನ್ಯವಾಗಿತ್ತು.

ಬೆಣ್ಣೆ ಟೋಸ್ಟ್, ಕಾಫಿ, ಚಹಾದ ಆರ್ಡರ‍್ ತೆಗೆದುಕೊಂಡು ಆತ ಹೊರಟುಹೋದ. ಆತ ಹೋದ ಮೇಲೆ ಗೋಡ್ಸೆ, ಎರಡೂ ಮಣಿಕಟ್ಟುಗಳನ್ನು ಒಟ್ಟಿಗೆ ತಂದು ಬೇಡಿ ಹಾಕಿಸಿಕೊಂಡಂತೆ ಅಭಿನಯಿಸಿ , ಈ ಕಾಕತಾಳೀಯತೆಗೆ ಸೋಜಿಗ ಪಡುತ್ತಾ ತಲೆ ಅಲ್ಲಾಡಿಸಿದರು.

ತಿಂಡಿ ತಿಂದು ಗೋಡ್ಸೆ ಕೋಣೆಗೆ ಮೂವರೂ ವಾಪಸಾದರು. ಗೋಡ್ಸೆ ಕೂತುಕೊಂಡು ಒಂದಾದ ಮೇಲೊಂದು ಮೂರು ಪತ್ರಗಳನ್ನು ಬರೆಯತೊಡಗಿದರೆ, ಇನ್ನಿಬ್ಬರು ಮಾತಿಲ್ಲದೆ ಅವರನ್ನೇ ನೋಡುತ್ತಾ ಕುಳಿತಿದ್ದರು. ಅವರಿಬ್ಬರಿಗೆ ಆಗಲೇ ಗೋಡ್ಸೆ ತಮ್ಮಿಂದ ದೂರ ಹೋದಂತೆ ಅನ್ನಿಸಿ, ತಮ್ಮ ಅಸಹಾಯಕತೆಗೆ ನಾಚಿಕೆಯಾಗತೊಡಗಿತು.

ಗೋಡ್ಸೆ ಪತ್ರ ಬರೆದು ಮುಗಿಸಿದರು. ಪ್ರತಿ ಪತ್ರದೊಂದಿಗೆ , ಹಿಂದಿನ ರಾತ್ರಿಯೇ ತೆಗೆಸಿದ್ದ ಗೋಡ್ಸೆಯ ಫೋಟೋ ಕೂಡಾ ಇಟ್ಟಿದ್ದರು.

ಆಮೇಲೆ ಮೂವರೂ ಕೂತು ಗೋಡ್ಸೆ ಪಿಸ್ತೂಲಿನ ಗುರಿ ಹಿಡಿಯಲು ಸುಲಭವಾಗುವಷ್ಟು ಗಾಂಧೀಜಿಯ ಸಮೀಪಕ್ಕೆ ಹೋಗುವ ಉಪಾಯಗಳ ಬಗ್ಯೆ ಚರ್ಚಿಸತೊಡಗಿದರು. ಗಾಂಧೀಜಿ ಉಳಿದುಕೊಂಡಿದ್ದ ಬಿರ್ಲಾ ಹೌಸಿನ ಬಂದೋಬಸ್ತಿನ ಸಿಬ್ಬಂದಿಯನ್ನು ದುಪ್ಪಟ್ಟು ಮಾಡಲಾಗಿದೆ; ಅನೇಕ ರಕ್ಷಣಾ ಸಿಬ್ಬಂದಿ ಮಫ್ತಿಯಲ್ಲಿ ಜನಸಾಮಾನ್ಯರ ಗುಂಪಿನಲ್ಲಿ ಒಂದಾಗಿ ಕಾವಲು ಮಾಡುತ್ತಿದ್ದಾರೆ ಎಂಬ ಸುದ್ದಿ ಅವರ ಕಿವಿಗೆ ಬಿದ್ದಿತ್ತು. ಈ ಮಫ್ತಿಯಲ್ಲಿರುವವರು ಪುಣೆಯಿಂದ ಕರೆಸಿದವರಾಗಿದ್ದರೆ , ಅವರು ಈ ಮೂವರನ್ನು ಗುರುತು ಹಿಡಿಯುವ ಸಂಭವವಿರಬಹುದು ಎಂಬ ಚಿಂತೆ ಅವರನ್ನು ಬಾಧಿಸುತ್ತಿತ್ತು.

ಆಪ್ಟೆಗೆ ಒಂದು ಉಪಾಯ ಹೊಳೆಯಿತು. ಗೋಡ್ಸೆ (ಆಗಿನಕಾಲದ) ಫೋಟೋಗ್ರಾಫರ‍್ ಥರಾ, ತಲೆಯ ಮೇಲೆ ಮುಸುಕು ಹಾಕಿಕೊಂಡು, ಕ್ಯಾಮೆರಾ ಮತ್ತು ಮೂರುಕಾಲಿನ ಪೀಠ ಹೊತ್ತು ಬಿರ್ಲಾ ಹೌಸಿನ ಪ್ರಾರ್ಥನಾ ಮೈದಾನಕ್ಕೆ ಪ್ರವೇಶ ದೊರಕಿಸಿಕೊಳ್ಳುವುದು. ಗೋಡ್ಸೆ ಅದನ್ನು ತಳ್ಳಿ ಹಾಕಿದರು. ಆಪ್ಟೆ ಇನ್ನೊಂದು ಉಪಾಯ ಸೂಚಿಸಿದರು. “ಬುರ್ಖಾ ಹಾಕಿಕೊಂಡು ಹೋದರೆ ಹೇಗೆ? ಹೇಗಿದ್ದರೂ ಗಾಂಧೀಜಿಯವರ ಪ್ರಾರ್ಥನೆಗೆ ಅನೇಕ ಹೆಂಗಸರು ಬುರ್ಖಾದಲ್ಲಿ ಹೋಗುತ್ತಾರೆ”.

“ಅಷ್ಟೇ ಅಲ್ಲ, ಅವರು ಮುಂದಿನ ಸಾಲಿನಲ್ಲಿಯೇ ಕೂರಬಹುದು” ಕರ್ಕರೆ ಸೇರಿಸಿದರು.

ಹೆಂಗಸರನ್ನು ಮುಂದಿನ ಸಾಲಿನಲ್ಲಿ ಕೂರಿಸುವುದು ಸತ್ಯವಾಗಿತ್ತು. ಮುಂದಿನ ಸಾಲು ಗಾಂಧಿಜಿ ಕೂತಲ್ಲಿಂದ ಬರಿಯ ಎಂಟು ಹತ್ತು ಅಡಿಗಳಷ್ಟು ಹತ್ತಿರದಲ್ಲಿದ್ದು, ಗೋಡ್ಸೆಗೆ ಗುರಿ ಹಿಡಿಯಲು ಅನುಕೂಲಕರವಾಗಿತ್ತು.

ಈ ವಿಚಾರ ಮೂವರಿಗೂ ಒಪ್ಪಿತವಾಯಿತು. ತಕ್ಷಣವೇ ಆಪ್ಟೆ ಮತ್ತು ಕರ್ಕರೆ ಬುರ್ಖಾ ಶೋಧಕ್ಕಾಗಿ ಹೊರಹೊರಟರು. ಚಾಂದನಿ ಚೌಕದ ಹತ್ತಿರ ಎರಡು ಮೂರು ಪರಿಚಯದ ಅಂಗಡಿಗಳಲ್ಲಿ ಬುರ್ಖಾ ಕೊಳ್ಳುವ ಬಗ್ಯೆ ವಿಚಾರಿಸಿದರು. ಆದರೆ ಅವರ ಅದೃಷ್ಟಕ್ಕೆ ಆ ಅಂಗಡಿಯವರು ಹಿಂದೂಗಳಾಗಿದ್ದು ಬುರ್ಖಾ ಅವರಲ್ಲಿರಲಿಲ್ಲ. ಆದರೆ ಗಿರಾಕಿಗಳ ಸಪ್ಪೆ ಮೋರೆ ನೋಡಿ ಕನಿಕರಪಟ್ಟು ಅರ್ಧ ಘಂಟೆಯಲ್ಲಿ ಎಲ್ಲಿಂದಲಾದರೂ ತರಿಸಿಕೊಡುವ ಭರವಸೆ ನೀಡಿದರು.

“ ಯಾವ ಸೈಜಿನದು ಬೇಕು”

“ಎತ್ತರದ ಹೆಂಗಸು, ತೀರಾ ದಪ್ಪವಿಲ್ಲ” ಕರ್ಕರೆಯಿಂದ ಉತ್ತರ ಬಂತು.

ಹೇಳಿದಂತೆ ಅರ್ಧ ಘಂಟೆಯಲ್ಲಿ ಬುರ್ಖಾ ಸಿಕ್ಕಿತು. ಐವತ್ತು ರೂಪಾಯಿ ತೆತ್ತು ಕೊಂಡು ಉತ್ಸಾಹದಿಂದ ರೂಮಿಗೆ ವಾಪಸಾದರು. ಗೋಡ್ಸೆ ಅದರೊಳಗೆ ತೂರಿ ನೋಡಿದರೆ , ಯಾವುದೇ ಸಾಧಾರಣ ಮುಸ್ಲಿಮ್ ಮಹಿಳೆಯಷ್ಟೇ ಸಹಜವಾಗಿ ಕಂಡಿತು. ಗೋಡ್ಸೆ ನಡೆಯುವಾಗ ಕಾಲು ತೊಡರುತ್ತಿತ್ತು, ಕೈಬೀಸುವುದಕ್ಕೆ ಅಡಚಣೆಯಾಗುತ್ತಿತ್ತು. ಬೇಸತ್ತ ಗೋಡ್ಸೆ ಅದನ್ನು ತೆಗೆದು ಹಾಸಿಗೆಯ ಮೇಲೆಸೆದು “ ಊಪಯೋಗವಿಲ್ಲ” ಎಂದು ನಿಟ್ಟುಸಿರಿಟ್ಟರು.

“ಅದಕ್ಕೆ ಎಷ್ಟು ಕೊಟ್ಟಿದ್ದೀವಿ ಗೊತ್ತಾ !” ಕರ್ಕರೆ ಗೊಣಗಿದರು.

“ಖರ್ಚಿನ ಬಗ್ಯೆ ಯೋಚನೆ ಮಾಡುವ ದಿನವೇ ಇದು!” ಗೋಡ್ಸೆ ಪ್ರತ್ಯುತ್ತರ ಕೊಟ್ಟರು.

ಮಾರುವೇಷದ ಪ್ರಶ್ನೆ ಬಗೆಹರಿಯಲಿಲ್ಲ. ಅದನ್ನು ಅಲ್ಲಿಗೇ ಬಿಟ್ಟು ಮೂರೂ ಜನ ಟ್ಯಾಕ್ಸಿ ಹಿಡಿದು ಬಿರ್ಲಾ ದೇವಸ್ಥಾನಕ್ಕೆ ಹೋಗಿ , ಅಲ್ಲಿಂದ ಅರ್ಧ ಮೈಲಿ ನಡೆದು ಸಣ್ಣ ಕಾಡಿನ ಪ್ರದೇಶ ತಲುಪಿದರು. ಅಲ್ಲಿ , ಸಾಧಾರಣ ಮಾನವನ ಮುಂಡದಷ್ಟು ದಪ್ಪಗಿರುವ ಮರವೊಂದನ್ನು ಆರಿಸಿದರು. ಅದರ ಮೇಲೆ ತಲೆ, ಎದೆ ಮತ್ತು ಹೊಟ್ಟೆಯ ಗುರುತು ಮಾಡಿದರು. ಗೋಡ್ಸೆ ಸುಮಾರು ೨೦-೨೫ ಅಡಿ ದೂರದಿಂದ ಗುಂಡು ಹಾರಿಸತೊಡಗಿದರು. ಗುಂಡುಗಳು ಗುರಿ ಮುಟ್ಟಿದವು. ಮುಂದೆ ೧೫,೧೦,೫ ಅಡಿ ಹೀಗೆ , ಹತ್ತಿರ ಹತ್ತಿರದಿಂದ ಗುಂಡು ಹೊಡೆಯುತ್ತಾ ಬಂದರು. ಫಲಿತಾಂಶದಿಂದ ಗೋಡ್ಸೆಗೆ ಬೆರೆಟಾ ಪಿಸ್ತೂಲಿನ ಬಗ್ಯೆ ಸಮಾಧಾನವಾಯಿತು. ಅದರ ಭದ್ರತಾ ಕೊಂಡಿ (Safety Latch) ಹಾಕಿ, ಜೇಬಿನಲ್ಲಿ ಇಳಿಬಿಟ್ಟರು.

ಅಲ್ಲಿಂದ ವಾಪಸು ಬರುತ್ತಿದ್ದಂತೆ, ಮಾರುವೇಷದಲ್ಲಿ ಬಿರ್ಲಾ ಹೌಸಿಗೆ ಹೋಗುವುದರ ಯೋಚನೆ ತ್ಯಜಿಸಿದ್ದಾಗಿ ಗೋಡ್ಸೆ ಹೇಳಿದರು. ಅದರ ಬದಲು ಸೈನ್ಯದವರ ಸಮವಸ್ತ್ರವನ್ನು ಹೋಲುವ ಬಟ್ಟೆ ಹಾಕಿಕೊಳ್ಳುವುದಾಗಿ ನಿರ್ಧರಿಸಿದರು. ರಸ್ತೆ ಬದಿಯ ಅಂಗಡಿಯೊಂದರಲ್ಲಿ ಬೇಕಾದಂಥ ದಿರಿಸು ಸಿಕ್ಕಿತು. ಅಲ್ಲಿಂದ ಪಂಜಾಬಿ ಹೋಟೆಲೊಂದರಲ್ಲಿ ಊಟ ಮಾಡಿ ಕೋಣೆಗೆ ವಾಪಸಾದರು. ಗೋಡ್ಸೆ ಹೊಸ ದಿರಿಸು ಹಾಕಿಕೊಂಡು ನೋಡಿದರು. ಸರಿಯಾಗಿತ್ತು.

ಈಗಾಗಲೇ ಮಧ್ಯಾಹ್ನ ಒಂದು ಹೊಡೆದಿತ್ತು. ಅವರು ರೈಲ್ವೆಯ ತಂಗುಕೋಣೆ ಖಾಲಿ ಮಾಡಬೇಕಾದ ಸಮಯ ಬಂದಿತ್ತು. ಕರ್ಕರೆ ಮತ್ತು ಆಪ್ಟೆ ರೈಲ್ವೇ ಕೌಂಟರಿಗೆ ಹೋಗಿ, ತಾವು ಆ ಕೋಣೆಯಲ್ಲಿ ಇನ್ನೊಂದು ದಿನ ಇರಬಹುದೇ ಎಂದು ವಿಚಾರಿಸಿದರು. ಅಲ್ಲಿಯ ಗುಮಾಸ್ತ ನಿರಾಕರಿಸಿದ್ದಷ್ಟೇ ಅಲ್ಲ, ಅವರೊಂದಿಗೇ ಬಂದು, ರೂಮು ಖಾಲಿ ಮಾಡುವವರೆಗೂ ಕದಲಲಿಲ್ಲ. ಮೂವರೂ ಸಾಮಾನುಗಳನ್ನು ಹೊತ್ತುಕೊಂಡು, ಎರಡನೇ ದರ್ಜೆಯ ಕಾಯು ಕೋಣೆ (Waiting Room) ಗೆ ಬಂದರು. ಕಾಯುತ್ತಿದ್ದ ಪ್ರಯಾಣಿಕರ ಸಂಸಾರಗಳು, ಸಾಮಾನು ಹೊತ್ತು ಅಡ್ಡಾಡುತ್ತಿರುವ ಹಮಾಲಿಗಳು, ಕಿರಿಚಾಡುತ್ತಿರುವ ಮಕ್ಕಳು ಹೀಗೆ ಕಿಕ್ಕಿರಿದಿದ್ದ ಆ ರೂಮಿನಲ್ಲಿ ಒಂದು ಖಾಲಿ ಬೆಂಚು ಹುಡುಕಿದರು. ಗೋಡ್ಸೆ ಬೆಂಚಿನ ಮೇಲೆ ಕೂತರೆ, ಬಾಕಿ ಇಬ್ಬರು ಗೋಡ್ಸೆಯ ಸಣ್ಣ ಪುಟ್ಟ ಆಸೆಗಳನ್ನೂ ಪೂರೈಸಲು ಕಾತರರಾಗಿ, ಪಿಸುಮಾತಾಡುತ್ತಾ , ಅವರ ಪಕ್ಕದಲ್ಲಿ ನೆಲದ ಮೇಲೆ ಕೂತರು. ನಿಮಗೆ ಏನಾದರೂ ಬೇಕೇ? ಯಾವುದಾದರೂ ಆಸೆಯಿದೆಯೇ? ಮತ್ತೆ ಮತ್ತೆ ಗೋಡ್ಸೆಗೆ ಕೇಳಿದರು.

“ಹೌದು. ನನಗೀಗ ಹುರಿದ ಕಡಲೇಬೀಜ ತಿನ್ನಬೇಕು ಅಂತ ಆಸೆಯಾಗುತ್ತಿದೆ”

“ಈಗಲೇ ಹೋಗಿ ತರುತ್ತೇವೆ”

ಆಪ್ಟೆ ಮತ್ತು ಕರ್ಕರೆ ತಕ್ಷಣ ಎದ್ದು ನಿಂತು ಹೊರಟರು. ಹೊರಟದ್ದೇನೋ ಸರಿ, ಆದರೆ ಅಕ್ಕಪಕ್ಕದಲ್ಲಿ ಎಷ್ಟು ಹುಡುಕಿದರೂ ಹುರಿದ ಕಡಲೇಬೀಜ ಸಿಗಲಿಲ್ಲ. ಪೆಚ್ಚು ಮೋರೆ ಹಾಕಿಕೊಂಡು ವಾಪಸಾದ ಅವರನ್ನು ನೋಡಿ ಕಿರುನಗೆ ಬೀರಿದ ಗೋಡ್ಸೆ ಹೇಳಿದರು “ ಸಿಗಲಿಲ್ಲ ಅಲ್ಲವೇ. ನನಗೆ ಗೊತ್ತು. ಕಳೆದ ಬಾರಿ ಕೂಡಾ ನನಗೆ ಸಿಕ್ಕಿರಲಿಲ್ಲ”

ಮತ್ತೆ ಸ್ವಲ್ಪ ಹೊತ್ತು ಅಲ್ಲಿಯೇ ಕೂತಿದ್ದರು, ಮರಣಶಯ್ಯೆಯಲ್ಲಿರುವವನ ಅಕ್ಕಪಕ್ಕದಲ್ಲಿ ಕುಳಿತ ಕುಟುಂಬದವರಂತೆ.

ಆಪ್ಟೆ ಸಟಕ್ಕನೆ ಎದ್ದು ಕರ್ಕರೆಯನ್ನು ಕರೆದರು.

“ಇನ್ನೊಂದು ಘಂಟೆಯಲ್ಲಿ ಬರುತ್ತೇವೆ”. ಗೋಡ್ಸೆ ಸಣ್ಣಗೆ ನಕ್ಕರೂ ಎಲ್ಲಿಗೆ ಹೋಗುತ್ತೀರಿ ಎಂದು ಕೇಳಲಿಲ್ಲ.

ಅವರಿಬ್ಬರೂ ಟ್ಯಾಕ್ಸಿ ಹಿಡಿದು, ಅಕ್ಬರ‍್ ರಸ್ತೆ ಅಲ್ಬುಕರ್ಕ್ ರಸ್ತೆಯ ಸಂಧಿಯಲ್ಲಿ ಇಳಿದರು. ಅಲ್ಲಿಂದ ಅಲ್ಬುಕರ್ಕ್ ರಸ್ತೆಯಗುಂಟ ನಡೆಯುತ್ತಾ ಔರಂಗಜೇಬ ರಸ್ತೆಯ ವರೆಗೆ ಹೋಗಿ , ವಾಪಸು ಬಂದರು. ಆ ನೆವದಲ್ಲಿ ಬಿರ್ಲಾ ಹೌಸಿನಲ್ಲಿಯ ಭದ್ರತಾ ವ್ಯವಸ್ಥೆಯನ್ನು ಚೆನ್ನಾಗಿ ಹತ್ತಿರದಿಂದ ನೋಡಿದರು. ಬಹಳಷ್ಟು ಪೋಲಿಸರೇನೋ ಇದ್ದರೂ, ಅವರೆಲ್ಲಾ ಉತ್ತರ ಭಾರತೀಯರಂತೆಯೇ ಕಂಡರು. ಸಮಾಧಾನದಿಂದ ವಾಪಸು ಟ್ಯಾಕ್ಸಿಯಲ್ಲಿ ಹೊರಟು. ಇಂಡಿಯಾ ಗೇಟು ಹತ್ತಿರ ಹಾದುಹೋಗುತ್ತಿದ್ದರು.

“ನಿಲ್ಲಿಸು, ನಿಲ್ಲಿಸು” ಗಡಿಬಿಡಿಯಲ್ಲಿ ಕರ್ಕರೆ ಕೂಗಿದರು.

“ಏನಾಯಿತು?” ಆಪ್ಟೆ ಗಾಬರಿಯಾದರು.

“ಅಲ್ಲಿ ನೋಡು” ಕರ್ಕರೆ ಬೆರಳು ತೋರಿಸಿದರು. ಇಂಡಿಯಾ ಗೇಟಿನ ಹತ್ತಿರ ತಿನಿಸುಗಳನ್ನು ಮಾರುತ್ತಿದ್ದ ಅನೇಕ ಕೈಗಾಡಿಗಳಲ್ಲಿ ಒಂದರಲ್ಲಿ ಹುರಿದ ಕಡಲೇಬೀಜ ಇತ್ತು!

ಅವರು ವಾಪಸು ಬಂದಾಗ ದೆಹಲಿ ಸ್ಟೇಷನ್ನಿನ ದೊಡ್ಡ ಗಡಿಯಾರ ಮೂರು ತೋರಿಸುತ್ತಿತ್ತು. ಪೊಟ್ಟಣದಲ್ಲಿ ಕಡಲೇಬೀಜ ನೋಡಿದ ಗೋಡ್ಸೆಯ ಮುಖ ಅರಳಿತು.

“ ಏನು , ಪುಣೆಯವೆರೆಗೆ ಹೋಗಿ ತಂದಿರಾ!” ಆಶ್ಚರ್ಯದಿಂದ ಕೇಳಿದರು.

ಮೂವರೂ ಕಡಲೇಬೀಜ ಮೆಲ್ಲುತ್ತಿದ್ದಂತೆ, ಆಪ್ಟೆ ತಮ್ಮ ಭೇಟಿಯ ಉದ್ದೇಶ, ಬಿರ್ಲಾ ಹೌಸಿನಲ್ಲಿ ಪೋಲೀಸರು ಹೆಚ್ಚಿದ್ದರೂ, ಅವರೆಲ್ಲಾ ಸ್ಥಳೀಯರಂತೆ ಕಂಡದ್ದನ್ನು ಹೇಳಿದರು.

ಹೊರಡಲಿಕ್ಕೆ ಇನ್ನೂ ಒಂದು ತಾಸು ಬಾಕಿ ಇತ್ತು. ಇದ್ದಕ್ಕಿದ್ದಂತೆ ಮಾತಾಡುವುದೆಲ್ಲಾ ಮುಗಿದು ಮೌನ ಆವರಿಸಿತು. ಪ್ರತಿ ಬಾರಿ ಕರ್ಕರೆ ಏನಾದರು ಹೇಳಲು ಹೊರಟರೂ, ಗಂಟಲು ಗದ್ಗದವಾಗಿ ಮಾತೇ ಹೊರಡುತ್ತಿರಲಿಲ್ಲ.

ಅಂತೂ ಹೇಗೋ ವೇಳೆ ಸರಿಯಿತು. ಗೋಡ್ಸೆ ವಾಚಿನತ್ತ ನೋಡಿದರು. ನಾಲ್ಕೂ ಕಾಲು ತೋರಿಸುತ್ತಿತ್ತು.

“ ಸರಿ. ಇನ್ನು ಹೊರಡಬೇಕು. ನಾನು ಬರೆದ ಪತ್ರಗಳನ್ನು ಟಪ್ಪಾಲಿಗೆ ಹಾಕಿದ್ದೇನೆ”

“ನಾವೂ ನಿಮ್ಮೊಂದಿಗೆ ಬರೋಣವೇ?” ಆಪ್ಟೆ ಕೇಳಿದರು.

“ಯಾಕಿಲ್ಲ. ಅದೂ ಇಷ್ಟು ದೂರ ಬಂದಮೇಲೆ” ಗೋಡ್ಸೆ , ಜೇಬು ತಡವಿಕೊಂಡು ಪಿಸ್ತೂಲ್ ಇದೆ ಎಂದು ಖಾತ್ರಿ ಮಾಡಿಕೊಳ್ಳುತ್ತಾ ಉತ್ತರಿಸಿದರು. ಆಮೇಲೆ ಗೋಡ್ಸೆ ಒಬ್ಬರೇ ಹೊರಹೋದರು.

ಉಳಿದಿಬ್ಬರೂ ಹಾಗೇ ಕುಳಿತಿದ್ದರು. ಹತ್ತು ನಿಮಿಷವಾಯಿತು.

“ಚಲೋ” ಆಪ್ಟೆ ಎದ್ದು ನಿಂತರು.

ಇಬ್ಬರೂ ಹೊರಹೊರಟು ಟಾಂಗಾ ಹಿಡಿದರು., ಕರ್ಕರೆ ಇನ್ನು ತಡೆಯಲಾಗದೆ ಬಿಕ್ಕಿ ಬಿಕ್ಕಿ ಅಳತೊಡಗಿದರು.

“ಸಮಾಧಾನ ಮಾಡಿಕೊಳ್ಳಿ, ವಿಷ್ಣುಪಂತ. ಈ ಹಂತದಲ್ಲಿ ನಮ್ಮ ಯೋಜನೆ ಹಾಳಾಗಬೇಕು ಅಂತ ಇಚ್ಛೆಯೇ?” ಆಪ್ಟೆ ಸಮಾಧಾನಿಸಿದರು.

ಮಧ್ಯದಲ್ಲಿ ಟಾಂಗಾ ಮತ್ತೊಮ್ಮೆ ಬದಲಾಯಿಸಿ, ಬಿರ್ಲಾ ಹೌಸಿನಿಂದ ಸುಮಾರು ಇನ್ನೂರು ಗಜ ದೂರದಲ್ಲಿ ಇಳಿದು ನಡೆಯತೊಡಗಿದರು.

ಪೋಲಿಸರಿಗೆ ಈಗಾಗಲೇ ಗಾಂಧೀ ಹತ್ಯೆಯ ಷಡ್ಯಂತ್ರದ ಬಗ್ಯೆ ಸುಳಿವು ಸಿಕ್ಕಿತ್ತು. ಅದಕ್ಕಾಗಿ ಕೈಗೊಂಡ ಅನೇಕ ಕ್ರಮಗಳಲ್ಲಿ , ಪ್ರಾರ್ಥನೆಗೆ ಬರುವ ಪ್ರತಿಯೊಬ್ಬರನ್ನೂ ತಲಾಷ್ ಮಾಡುವ ಯೋಜನೆಯೂ ಇತ್ತು. ಇದನ್ನು ಕೇಳಿ ಗಾಂಧೀಜಿ ದಿಗ್ಭ್ರಮೆಗೊಂಡು “ ದೇವಸ್ಥಾನಕ್ಕೋ, ಚರ್ಚಿಗೋ, ಮಸೀದಿಗೋ ಹೋಗುವವರನ್ನು ಹೀಗೆ ತಲಾಷ್ ಮಾಡುತ್ತೀರಾ” ಎಂದು ಪ್ರತಿಭಟಿಸಿದರು. ಈ ಯೋಜನೆಯನ್ನು ಕೈಬಿಡಲಾಯಿತು.

ಅಂತೆಯೇ, ೩೦ ಜನವರಿಯ ಸಂಜೆ, ಮಿಲಿಟರಿ ಸಮವಸ್ತ್ರವನ್ನು ಹೋಲುವ ಬಟ್ಟೆ ತೊಟ್ಟ ವ್ಯಕ್ತಿಯೊಬ್ಬ ಬಿರ್ಲಾ ಹೌಸಿನ ಸರ್ವೀಸ್ ದ್ವಾರದ ಮೂಲಕ ಒಳಬಂದಾಗ ಆತನನ್ನು ಯಾರೂ ತಡೆದು ತಪಾಸಣೆ ಮಾಡಲಿಲ್ಲ. ಅಷ್ಟೇ ಅಲ್ಲ, ಅರ್ಧ ಘಂಟೆಯ ನಂತರ ಬೂದು ಬಣ್ಣದ ಶಾಲು ಹೊದ್ದ ಇನ್ನಿಬ್ಬರೂ ಸರಾಗವಾಗಿ ಒಳಬಂದರು.

ಇಂದು ಗಾಂಧೀಜಿಗೆ ಸಮಾಧಾನದ ದಿವಸವಾಗಿತ್ತು. ವಿಭಜನೆಯೊಂದಿಗೆ ಭಾರತ , ಪಾಕಿಸ್ತಾನಗಳಲ್ಲಿ ಶುರುವಾದ ನರಮೇಧದ ಭಾಗವಾಗಿ ದೆಹಲಿಯಲ್ಲಿಯೂ ನಡೆದಿದ್ದ ಮುಸ್ಲಿಮರ ಹತ್ಯೆ, ಗಾಂಧೀಜಿಯ ಉಪವಾಸದ ಕಾರಣ ತಹಬಂದಿಗೆ ಬಂದು ಶಾಂತಿ ನೆಲೆಸಿತ್ತು. ಇನ್ನು ಇತರ ಪ್ರದೇಶಗಳಿಗೆ ತೆರಳಿ ಅಲ್ಲಿಯೂ ಶಾಂತಿ ಸ್ಥಾಪಿಸುವ ವಿಚಾರ ನಡೆದಿತ್ತು.

ಆದರೆ ಅದಕ್ಕಿಂತ ಮೊದಲು ಇನ್ನೂ ಎರಡು ಮುಖ್ಯ ಸವಾಲುಗಳನ್ನು ಬಗೆಹರಿಸಬೇಕಾಗಿತ್ತು.

ಒಂದು ಪಕ್ಷಕ್ಕೆ ಸಂಬಂಧಿಸಿದ್ದು - ಈಗಾಗಲೇ ಪ್ರಕಟವಾಗಿದ್ದ ಕಾಂಗ್ರೆಸ್ಸಿಗರ ಅಧಿಕಾರ ದಾಹ. ಇದಕ್ಕುತ್ತರವಾಗಿ ಗಾಂಧಿ, ಕಾಂಗ್ರೆಸ್ಸಿನ ರಾಜಕೀಯ ಮುಖವನ್ನು ಸಂಪೂರ್ಣ ವಿಸರ್ಜಿಸಿ , ಅದನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸುವ ಉದ್ದೇಶದ ಕರಡು ಸಂವಿಧಾನ ತಯಾರಿಸಿದ್ದರು.

ಇನ್ನೊಂದು ಸರಕಾರಕ್ಕೆ ಸಂಬಂಧಿಸಿದ್ದು - ನೆಹರೂ ಮತ್ತು ಪಟೇಲ್ ಇವರಿಬ್ಬರಲ್ಲಿ ಒಬ್ಬರನ್ನು ಸರಕಾರದ ಮುಖ್ಯಸ್ಥರನ್ನಾಗಿ ಆರಿಸುವುದು, ಇದು ಗಾಂಧೀಜಿಗೆ ಸುಲಭವಾದ ಕೆಲಸವಾಗಿರಲಿಲ್ಲ. ಇದನ್ನು ಬಗೆಹರಿಸುವ ಅಂಗವಾಗಿಯೇ, ಇಂದು ಮಧ್ಯಾಹ್ನ ಗಾಂಧೀಜಿ ಪಟೇಲರೊಂದಿಗೆ ಮಾತುಕತೆ ನಡೆಸಲಿದ್ದರು.

ಇಂದು ಗಾಂಧೀಜಿಯ ದಿನ ಎಂದಿನಂತೆ ಬೆಳಿಗ್ಯೆ ೩.೩೦ಗೆ ಏಳುವುದರಿಂದ ಶುರುವಾಗಿತ್ತು. ಪ್ರಾರ್ಥನೆ ಮುಗಿಸಿ, ತಮ್ಮ ಮೇಜಿನ ಮೇಲೆ ಮೂರು ಘಂಟೆ ಕೆಲಸ ಮಾಡಿ, ಮತ್ತೆ ಮಲಗಿದ್ದರು. ಎಂಟಕ್ಕೆ ಎದ್ದು ಪೇಪರುಗಳ ಮೇಲೆ ಕಣ್ಣಾಡಿಸಿ, ಸ್ನಾನ, ತಿಂಡಿ ಮುಗಿಸಿದ್ದರು, ಮತ್ತೊಂದು ಎರಡು ಘಂಟೆ ಕೆಲಸ ಮಾಡಿ , ಸಣ್ಣ ನಿದ್ರೆ ತೆಗೆದು, ಸುಮಾರು ಎರಡು ಘಂಟೆಯ ಹೊತ್ತಿಗೆ ಇಪ್ಪತ್ತಕ್ಕೂ ಹೆಚ್ಚು ಸಂಖ್ಯೆಯಲ್ಲಿ ಕಾಯುತ್ತಿದ್ದ ಜನರ - ನಿರಾಶ್ರಿತರು, ಪತ್ರಿಕಾ ಪ್ರತಿನಿಧಿಗಳು, ಅನುಯಾಯಿಗಳು, ಹಾಗೇ ಜೊತೆಯಲ್ಲಿ ಬಂದವರು ಇತ್ಯಾದಿ ಇತ್ಯಾದಿ, ಭೇಟಿಗೆ ತಯಾರಾಗಿದ್ದರು. ಬಂದವರಲ್ಲಿ ನುರಿತ ಸರಕಾರೀ ಅಧಿಕಾರಿಗಳೂ ಇದ್ದರು. ಸರಕಾರದ ಮಹತ್ವದ ನಿರ್ಧಾರಗಳಲ್ಲಿ ಅನೇಕವನ್ನು ಬಿರ್ಲಾ ಹೌಸಿನಲ್ಲಿಯೇ ತೆಗೆದುಕೊಳ್ಳಲಾಗುತ್ತಿತ್ತು.

ನಾಲ್ಕು ಘಂಟೆ ಸರದಾರ ಪಟೇಲ್ ತಮ್ಮ ಮಗಳೊಂದಿಗೆ ಆಗಮಿಸಿದರು. ಸುಮಾರು ಒಂದು ಘಂಟೆಯ ಮಾತುಕತೆಯಲ್ಲಿ ಹೆಚ್ಚೇನೂ ಪ್ರಗತಿಯಾಗಲಿಲ್ಲ.

ಘಂಟೆ ಐದಕ್ಕೆ ಕೆಲ ನಿಮಿಷಗಳಿದ್ದಾಗ, ಗಾಂಧೀಜಿಯವರ ಹದಿಹರೆಯದ ಸಂಗಾತಿಗಳು ಮನು, ಮತ್ತು ಅಭಾ ಕೋಣೆಯೊಳಕ್ಕೆ ಬಂದರು. ಗಾಂಧೀಜಿ ಗಡಿಯಾರ ನೋಡಿ , ತಮ್ಮ ಪ್ರಾರ್ಥನೆಯ ಸಮಯವಾಯಿತೆಂದು ಪಟೇಲರಿಗೆ ತಿಳಿಸಿ, ಐದೂ ಹತ್ತಕ್ಕೆ ಮನು, ಅಭಾರ ಹೆಗಲ ಮೇಲೆ ಕೈ ಊರಿ , ಪ್ರಾರ್ಥನೆಗೆಂದು ಹೊರಬಿದ್ದರು. ಅವರು ಬಿರುಸಿನಿಂದ ನಡೆಯುತ್ತಿದ್ದಂತೆ, ನೆರೆದಿದ್ದ ಜನಜಂಗುಳಿ ಅವರಿಗೆ ವಂದಿಸುತ್ತಿತ್ತು. ಗಾಂಧೀಜಿ ನಡೆಯುತ್ತಲೇ, ಪ್ರತಿವಂದಿಸುತ್ತಾ, ಹುಲ್ಲುಹಾಸಿನ ಮೈದಾನದಲ್ಲಿ ಸ್ವಲ್ಪ ಎತ್ತರದಲ್ಲಿದ್ದ ಕೂರುವ ಜಾಗಕ್ಕೆ ಮೆಟ್ಟಲು ಹತ್ತಿ ಸಾಗಿದರು.

ಅಂದು ಜನಜಂಗುಳಿ ಸುಮಾರು ಐನೂರರಷ್ಟಿತ್ತು. ಕರ್ಕರೆ ಮತ್ತು ಆಪ್ಟೆ ಜನರನ್ನು ಹಿಂದೆ ಸರಿಸಿ, ಗೋಡ್ಸೆಯ ಅಕ್ಕಪಕ್ಕದಲ್ಲಿ ಬಂದು ನಿಂತಿದ್ದರು. ಅವರನ್ನು ನೋಡಿದರೂ ಗೋಡ್ಸೆ ಪರಿಚಿತರೆಂದು ತೋರಿಸಿಕೊಳ್ಳಲಿಲ್ಲ. ಅಷ್ಟರಲ್ಲಿ ಜನರಲ್ಲಿ ಸಂಚಲನೆ ಉಂಟಾಯಿತು. ಗಾಂಧೀಜಿ ಬರುತ್ತಿದ್ದರು.

ಗಾಂಧೀಜಿ ಜನರಿಗೆ ವಂದಿಸಲು ಕೈಎತ್ತುತ್ತಿದ್ದಂತೆ, ಗೋಡ್ಸೆ ಪಿಸ್ತೂಲಿನ ಭದ್ರತಾ ಕೊಂಡಿಯನ್ನು ಜೇಬಿನಲ್ಲಿದ್ದಂತೆಯೇ ಕಳಚಿ, ಮುಂದೆ ಬಂದರು.

ಪಿಸ್ತೂಲು ಬಲಗೈಯಲ್ಲಿದ್ದಂತೆಯೇ, ಎರಡೂ ಕೈ ಮುಗಿದು ಗಾಂಧೀಜಿಗೆ ನಮಸ್ಕರಿಸಿದ ಗೋಡ್ಸೆ, ಎಡಗೈಯಿಂದ ಗಾಂಧೀಜಿಯ ಪಕ್ಕದ್ದಲ್ಲಿದ್ದ ಹುಡುಗಿಯನ್ನು ಸರಿಸುತ್ತಾ, ಗುಂಡು ಹಾರಿಸಿದರು. ಗಾಂಧೀಜಿ ತಕ್ಷಣ ಉಸಿರೆಳೆದುಕೊಂಡು, “ಆ.....ಹ್” ಎಂಬ ಉದ್ಗಾರದೊಂದಿಗೆ ಕುಸಿದರು. ಪಿಸ್ತೂಲ್ ಕೈಯಲ್ಲಿದ್ದಂತೆಯೇ ಕೈಮೇಲೆತ್ತಿ ಹಿಡಿದ ಗೋಡ್ಸೆ “ಪೋಲೀಸ್... ಪೋಲೀಸ್” ಎಂದು ಕೂಗಿದರು. ಇದು ಪೂರ್ವನಿಯೋಜಿತ ಹತ್ಯೆ ಎಂದು ಜನರಿಗೆ ತಿಳಿಸಬೇಕಾಗಿತ್ತು. ಅವರಿಗೆ ಪಿಸ್ತೂಲಿನೊಂದಿಗೆ ಬಂಧನಕ್ಕೊಳಗಾಗಬೇಕಾಗಿತ್ತೇ ಹೊರತು ಓಡಿ ಹೋಗುವ ಇಚ್ಛೆ ಇರಲಿಲ್ಲ.

ಇದ್ದಕ್ಕಿದಂತೆ ಎಲ್ಲವೂ ಸ್ತಬ್ದವಾಯಿತು. ಸುಮಾರು ಅರ್ಧ ನಿಮಿಷ ಯಾರೂ ನಿಂತಲ್ಲಿಂದ ಕದಲಲಿಲ್ಲ. ನಂತರ ಜನರಗುಂಪಿನಿಂದ ವಾಯುಸೇನೆಯ ಸಮವಸ್ತ್ರದಲ್ಲಿದ್ದವರೊಬ್ಬರು ಬಂದು ಗೋಡ್ಸೆಯ ಮೇಲೆ ಹಾರಿ ಮಣಿಕಟ್ಟನ್ನು ಗಟ್ಟಿಯಾಗಿ ಹಿಡಿದರು. ಪಿಸ್ತೂಲು ಕೆಳಗೆ ಬಿತ್ತು. ನಿಶ್ಚಲವಾಗಿದ್ದ ಗಾಂಧೀಜಿಯವರ ಬೆತ್ತಲೆ ಎದೆಯಿಂದ ರಕ್ತ ಹರಿಯತೊಡಗಿತ್ತು.

ಗಾಂಧೀಜಿಯ ಹತ್ತಿರದಲ್ಲಿದ್ದ ಗುರುಬಚನ್ ಸಿಂಗ್ ಎಂಬ ಉದ್ಯಮಿ ಗಾಂಧೀಜಿ ಸಾಯುವಾಗ “ಹೇ ರಾಮಾ” ಎಂದು ಉದ್ಗರಿಸಿದರು ಎಂದು ಮುಂದೆ ನ್ಯಾಯಲಯದಲ್ಲಿ ಹೇಳಿದರೆ, ಗೋಡ್ಸೆಯ ಹತ್ತಿರದಲ್ಲಿದ್ದು ಗಾಂಧೀಜಿ ಗುಂಡಿಗೀಡಾದುದನ್ನು ಕಣ್ಣಾರೆ ನೋಡಿದ ಕರ್ಕರೆಯ ಪ್ರಕಾರ ಗಾಂಧೀಜಿ “ಆ.....ಹ್” ಎಂದಷ್ಟೇ ಉದ್ಗರಿಸಿದರು. ಇದರಲ್ಲಿ ಅವರವರ ನಂಬಿಕೆಗೆ , ಭಾವಕ್ಕೆ ತಕ್ಕಂತೆ ಅವರು ಕಲ್ಪಿಸಿಕೊಂಡಿರಬಹುದಾದ ಸಾಧ್ಯತೆಗಳಿವೆ. ಇವರಿಬ್ಬರ ಅಭಿಪ್ರಾಯಗಳೂ ಸತ್ಯವಾಗಿರಬಹುದಾದ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಏಕೆಂದರೆ, ಗಾಂಧೀಜಿ “ಹೇ ರಾಮಾ” ಎಂದು ಉದ್ಗರಿಸಿದ್ದರೂ ಅವರ ಆ ಅಘಾತದ ಕ್ಷಣದಲ್ಲಿ ಈ ಶಬ್ದಗಳು ಸ್ಪಷ್ಟವಾಗಿರದೇ “ಆ.....ಹ್” ಎಂದಂತೆ ಕರ್ಕರೆಗೆ ಕೇಳಿರಬಹುದು.

ಉಪಸಂಹಾರ: ಮುಂದೆ ನಡೆದ ಮೊಕದ್ದಮೆಯಲ್ಲಿ ನಥೂರಾಮ್ ಗೋಡ್ಸೆ ಮತ್ತು ನಾರಾಯಣ ಆಪ್ಟೆಗೆ ಫಾಸಿ ಶಿಕ್ಷೆ ವಿಧಿಸಲಾಯಿತು. ಕರ್ಕರೆ ಸೇರಿದಂತೆ ಮೂವರಿಗೆ (ಮತ್ತಿಬ್ಬರು - ಮದನಲಾಲ್ ಪಾಹ್ವಾ ಮತ್ತು ನಥೂರಾಮರ ಸೋದರ ಗೋಪಾಲ ಗೋಡ್ಸೆ) ಜೀವಾವಧಿ ಶಿಕ್ಷೆಯಾಯಿತು.

ಆಧಾರ : The Men Who Killed Gandhi – A book by Mr. Manohar Malgonkar